ದಾವಣಗೆರೆ:ರಾಜ್ಯದಲ್ಲಿ ನಡೆದ ಚರ್ಚ್ ಮೇಲಿನ ದಾಳಿಯ ಆರೋಪಿಗಳನ್ನು ಗುರುತಿಸಿ, ಕಾನೂನು ಕ್ರಮ ಜರುಗಿಸಿದಾಗ ಮಾತ್ರ ಸಾಮಾಜಿಕ ನ್ಯಾಯಕ್ಕೆ, ಭದ್ರತೆಗೆ ಅರ್ಥ ದೊರೆಯುತ್ತದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್.ಆರ್. ನಾಯಕ್ ಪ್ರತಿಪಾದಿಸಿದರು.
ಹುಬ್ಬಳ್ಳಿಗೆ ಹೋಗುವ ಮಾರ್ಗ ಮಧ್ಯೆ ಶುಕ್ರವಾರ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚರ್ಚ್ ದಾಳಿ ಕುರಿತು ಸೋಮಶೇಖರ್ ಆಯೋಗ ನೀಡಿದ ವರದಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಆಯೋಗ ದಾಳಿ ನಡೆದಿರುವ ಬಗ್ಗೆ ಒಪ್ಪಿಕೊಂಡಿದೆ. ದಾಳಿ ನಡೆದಿರುವುದು ಸತ್ಯ ಎಂದ ಮೇಲೆ ಆರೋಪಿಗಳನ್ನು ಗುರುತಿಸುವುದು ಕರ್ತವ್ಯ ಅಲ್ಲವೇ? ಒಂದೇ ದಿನ ನಿಗದಿತ ಸಮಯದ ಒಳಗೆ ಹಲವು ಕಡೆ ದಾಳಿ ನಡೆಯುತ್ತದೆ
ಎಂದರೆ ಅದು ಪೂರ್ವನಿರ್ಧರಿತವಾದ ಸಂಘಟಿತ ದಾಳಿ ಅಲ್ಲವೇ? ಕೆಲ ಪಟ್ಟಭದ್ರ ಹಿತಾಸಕ್ತಿಗಳು ಇದರ ಹಿಂದಿವೆ ಎಂಬುದು ಮೇಲುನೋಟಕ್ಕೆ ತೋರುತ್ತದೆ ಅಲ್ಲವೇ? ಎಂದು ಪ್ರಶ್ನಿಸಿದರು. ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದರೆ ಸರ್ಕಾರದ ಮೇಲೆ ಜನರು ಇಟ್ಟಿರುವ ಭರವಸೆ, ನಿರೀಕ್ಷೆಗೆ ಧಕ್ಕೆಯಾಗುತ್ತದೆ ಎಂದು ಎಚ್ಚರಿಸಿದರು.