ಬೆಂಗಳೂರು: ಗ್ರೀನ್ಪೀಸ್ ಇಂಡಿಯಾ ಸಂಸ್ಥೆಯು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ `ಐ ಲವ್ ಆರ್ಕ್ಟಿಕ್' ಜಾಗೃತಿ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಿತ್ತು.
ವಿಶ್ವದಲ್ಲಿ ಹೆಚ್ಚುತ್ತಿರುವ ತಾಪಮಾನದ ಪರಿಣಾಮ ಆರ್ಕ್ಟಿಕ್ ದ್ವೀಪದ ಮಂಜುಗಡ್ಡೆಯು ದಿನದಿಂದ ದಿನಕ್ಕೆ ಕರಗುತ್ತಿದೆ. ಇದರಿಂದ `ಆರ್ಕ್ಟಿಕ್ ಉಳಿಸಿ' ಎಂಬ ಘೋಷಣೆಯೊಂದಿಗೆ ಈ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದೆ.
`ಜಾಗೃತಿ ಕಾರ್ಯಕ್ರಮದಲ್ಲಿ 30 ದೇಶಗಳಿಂದ ಸಾವಿರಾರು ಜನರು ಭಾಗವಹಿಸಿದ್ದಾರೆ. ವಿಶ್ವ ಭೂ ದಿನಾಚರಣೆಯಲ್ಲಿ ಎಲ್ಲರೂ ವಿಶ್ವವನ್ನು ಉಳಿಸುವತ್ತ ಹೆಜ್ಜೆ ಹಾಕಬೇಕಿದೆ. ಏಕೆಂದರೆ, ಆರ್ಕ್ಟಿಕ್ ದ್ವೀಪದ ಮಂಜುಗಡ್ಡೆ ಕರಗಿದರೆ ವಿಶ್ವಕ್ಕೆ ಆಪತ್ತು ಒದಗಲಿದೆ' ಎಂದು ಗ್ರೀನ್ ಪೀಸ್ ಸಂಸ್ಥೆಯ ಸಂಚಾಲಕ ಮಹಾಲಯ ಹೇಳಿದರು.
`ವಿಶ್ವದಲ್ಲಿ 2.7 ಮಿಲಿಯನ್ ಜನರು ಈ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆರ್ಕ್ಟಿಕ್ ದ್ವೀಪದ ಉಷ್ಣತೆಯು 2 ಡಿಗ್ರಿಯಿಂದ 5 ಡಿಗ್ರಿವರೆಗೆ ಹೆಚ್ಚಿದೆ. ಇದು ನಮಗೆ ಅಪಾಯದ ಮುನ್ಸೂಚನೆಯಾಗಿದೆ. ಈ ಕುರಿತು ಅಂತರರಾಷ್ಟ್ರೀಯ ನಾಯಕರು ಚಿಂತನೆ ನಡೆಸಬೇಕಾಗಿದೆ' ಎಂದು ಗ್ರೀನ್ಪೀಸ್ ಸಂಸ್ಥೆಯ ಸಂಚಾಲಕ ಸದಸ್ಯ ಬಪ್ಪಿ ಮಹಾಂತ ತಿಳಿಸಿದರು.