ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತಾಜಿ ಹುಡುಕಾಟಕ್ಕೆ ನೆರವಾದ ಆರ್‌ಟಿಐ: ಸತ್ಯಶೋಧದ ಗುರುತುಗಳು...

ನೇತಾಜಿ ಸುಭಾಷ್ ಚಂದ್ರ ಬೋಸ್
Last Updated 23 ಜನವರಿ 2020, 4:50 IST
ಅಕ್ಷರ ಗಾತ್ರ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಎಲ್ಲಿ ಇಡಬೇಕು ಎಂದು ಸೋವಿಯತ್ ಒಕ್ಕೂಟದ ನಾಯಕ ಸ್ಟಾಲಿನ್ 1946ರಲ್ಲಿ ತಮ್ಮ ವಿದೇಶಾಂಗ ವ್ಯವಹಾರಗಳ ಸಚಿವರುಗಳಾದ ಮೊಲೊಟೊವ್ ಹಾಗೂ ಆಂಡ್ರೆ ವಿಶಿಂಗ್ಸ್‌ಕಿ ಜೊತೆ ಚರ್ಚಿಸುತ್ತಿದ್ದರು. ಈ ಕುರಿತ 1946ರ ಅಕ್ಟೋಬರ್‌ನ ದಾಖಲೆಯನ್ನು ಪೋಲಿಷ್ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸಹೋದ್ಯೋಗಿ ಮೇಜರ್ ಜನರಲ್‌ ಅಲೆಗ್ಸಾಂಡರ್ ಕೊಲೆಸ್ನಿಕೊವ್ ಹುಡುಕಿದ್ದರು. ನೇತಾಜಿ ಮೃತಪಟ್ಟಿದ್ದಾರೆ ಎಂಬ ಸುದ್ದಿ ಹೊರಬಿದ್ದ ನಂತರವೂ ಕನಿಷ್ಠ ಒಂದು ವರ್ಷ–ಕನಿಷ್ಠ 1946ರವರೆಗೆ ಅವರು ಬದುಕಿದ್ದರು ಎನ್ನುವುದಕ್ಕೆ ಅದೇ ಪುಷ್ಟಿ’ ಎಂದು ಜಾಧವಪುರ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ಸಂಬಂಧಗಳ ಪರಿಣತೆ ಪ್ರೊ. ಪುರಭಿ ರಾಯ್ ತಿಳಿಸಿದರು.

ಕಾಮಿನ್‌ಟರ್ನ್ ಭಾರತೀಯ ಸದಸ್ಯರು (ಕಮ್ಯುನಿಸ್ಟ್‌ ಚಳವಳಿಯಲ್ಲಿದ್ದವರು) ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿರುವುದಕ್ಕೆ ಹಳೆಯ ದಾಖಲೆಗಳೇನಾದರೂ ಸಿಗುತ್ತವೆಯೇ ಎಂದು ಪತ್ತೆ ಮಾಡಲು ‘ಏಷ್ಯಾಟಿಕ್ ಸೊಸೈಟಿ ಕೋಲ್ಕತ್ತ’ವು ಮೂವರು ಸದಸ್ಯರ ತಂಡವನ್ನು 1990ರ ದಶಕದ ಮಧ್ಯಭಾಗದಲ್ಲಿ ರಷ್ಯಾಗೆ ಕಳುಹಿಸಿಕೊಟ್ಟಿತು. ಆ ತಂಡದಲ್ಲಿ ಪುರಭಿ ರಾಯ್ ಕೂಡ ಇದ್ದರು.

ಪುರಭಿ ರಾಯ್ ಅವರು ಬೇರೆ ಮಾಹಿತಿ ಕಲೆಹಾಕುವಾಗ ರಷ್ಯಾದಲ್ಲಿ ನೇತಾಜಿ ಇದ್ದರೆನ್ನುವುದಕ್ಕೆ ಸಾಕ್ಷ್ಯ ಸಿಕ್ಕಿತು. ಬಾಂಬೆಯಲ್ಲಿ 1946ರಲ್ಲಿ ಇದ್ದ ರಷ್ಯಾದ ಕೆ.ಜಿ.ಬಿ. ಏಜೆಂಟ್ ಒಬ್ಬರು, ‘...ನೆಹರು ಅಥವಾ ಗಾಂಧಿ ಜೊತೆ ಕೆಲಸ ಮಾಡಲು ಸಾಧ್ಯವಿಲ್ಲ, ನಾವು ಸುಭಾಷ್ ಬೋಸರನ್ನು ಬಳಸಿಕೊಳ್ಳಬೇಕು’ ಎಂದು ಹೇಳಿದ್ದ ದಾಖಲೆ ದೊರೆಯಿತು. ಮುಖರ್ಜಿ ಆಯೋಗಕ್ಕೆ ಸಾಕ್ಷ್ಯಗಳನ್ನು ನೀಡಿದವರಲ್ಲಿ ಪುರಭಿ ರಾಯ್ ಕೂಡ ಮುಖ್ಯರಾದವರು. ರಷ್ಯಾದಿಂದ ಅವರು ಮಹತ್ವದ ಹಲವು ದಾಖಲೆಗಳನ್ನು ಸಂಗ್ರಹಿಸಿ, ಮುಖರ್ಜಿ ಆಯೋಗಕ್ಕೆ ಒದಗಿಸಿದ್ದರು.

‘ಬೋಸರ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತಾ ಮೇಜರ್ ಜನರಲ್‌ ಅಲೆಗ್ಸಾಂಡರ್‌ ಕೊಲೆಸ್ನಿಕವ್‌ ಒಂದು ಗುಟ್ಟನ್ನು ಹಂಚಿಕೊಂಡರು. 1946ರ ಜನವರಿ 15ರಂದು ಜವಾಹರಲಾಲ್ ನೆಹರೂ ಅವರು ಬೋಸರಿಂದ ಬಂದಿದ್ದ ಒಂದು ಪತ್ರವನ್ನು ಸ್ವೀಕರಿಸಿದರು. ತಾನು ರಷ್ಯಾದಲ್ಲಿ ಇದ್ದು, ಭಾರತಕ್ಕೆ ಅಲ್ಲಿಂದ ಬರಬೇಕು ಎನ್ನಿಸಿದೆ ಎಂಬ ಇಂಗಿತವನ್ನು ಬೋಸ್ ಆ ಪತ್ರದಲ್ಲಿ ವ್ಯಕ್ತಪಡಿಸಿದ್ದರು. ಆ ಸಂಗತಿ ಗೊತ್ತಿದ್ದವರಲ್ಲಿ ಗಾಂಧಿ ಹಾಗೂ ಶರತ್ ಬೋಸ್ ಕೂಡ ಸೇರಿದ್ದರು ಎಂದು ಕೊಲೆಸ್ನಿಕವ್‌ ತಮಗೆ ಸಿಕ್ಕಿದ್ದ ವರದಿಯೊಂದನ್ನು ಉಲ್ಲೇಖಿಸಿ ನನಗೆ ಮಾಹಿತಿ ದಾಟಿಸಿದರು’ ಎಂದು ರಾಯ್ ಹೇಳಿದ್ದರು. ಮಹತ್ವದ ಈ ಗುಟ್ಟು ರಟ್ಟಾಗದೇ ಇರಲಿ ಎಂಬ ಕಾರಣಕ್ಕೆ ಸರ್ಕಾರಗಳು ಮೊದಲಿನಿಂದ ಕಡತಗಳಲ್ಲಿನ ಸಂಗತಿಗಳನ್ನು ಬಹಿರಂಗ ಪಡಿಸುತ್ತಿಲ್ಲವೇನೋ?

ಪಿ.ಎಂ.ಒ. (ಪ್ರಧಾನಿ ಕಚೇರಿ)ಯಲ್ಲಿ ಇದ್ದ ಕೆಲವು ಪ್ರಮುಖ ಕಡತಗಳು ಮಾಜಿ ಸಚಿವ ಸುಬ್ರಮಣಿಯನ್ ಸ್ವಾಮಿ ಅವರಿಗೆ ಲಭ್ಯವಾಗಿದ್ದವು. ‘ಚಂದ್ರಶೇಖರ್ ಅವರು ಪ್ರಧಾನಿಯಾಗಿದ್ದಾಗ ಸಂಪುಟದಲ್ಲಿ ಇದ್ದ ಹಿರಿಯ ಸಚಿವರಲ್ಲಿ ನಾನೂ ಒಬ್ಬ. ಅಸ್ಥಿಯನ್ನು ತೆಗೆದುಕೊಂಡು ಹೋಗುವಂತೆ ಭಾರತಕ್ಕೆ ಜಪಾನ್ ಹೇಳಿದಾಗ, ಕಡತಗಳನ್ನು ಗಮನಿಸುವಂತೆ ಚಂದ್ರಶೇಖರ್ ನನಗೆ ಸೂಚಿಸಿದರು. ಜಪಾನ್‌ನಲ್ಲಿದ್ದ ಅಸ್ಥಿ ನೇತಾಜಿ ಅವರದ್ದಲ್ಲ ಎನ್ನುವುದು ಸ್ಪಷ್ಟವಾಯಿತು. ಅಸ್ಥಿಯನ್ನು ತರುವುದು ಬೇಡ ಎಂದು ನಾನು ಪ್ರಧಾನಿಗೆ ಸಲಹೆ ಕೊಟ್ಟೆ’ ಎಂದು ಆಗ ಸ್ವಾಮಿ ಹೇಳಿದ್ದರು. ನೇತಾಜಿ ನಾಪತ್ತೆಗೆ ಸಂಬಂಧಿಸಿದ ಕಡತಗಳನ್ನು ಕೇಂದ್ರ ಸರ್ಕಾರ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿ ಸದ್ಯದಲ್ಲೇ ಕೋರ್ಟ್ ಮೆಟ್ಟಿಲೇರುವುದಾಗಿಯೂ ಸುಬ್ರಮಣಿಯನ್‌ ಸ್ವಾಮಿ ತಿಳಿಸಿದ್ದಾರೆ.

2006ರಲ್ಲಿ ನಡೆದ ಸಂಸತ್ ಕಲಾಪದಲ್ಲಿ ಗೃಹ ಸಚಿವ ಶಿವರಾಜ್ ಪಾಟೀಲ್ ಅವರು ಮುಖರ್ಜಿ ಆಯೋಗದ ವರದಿಯನ್ನು ತಿರಸ್ಕರಿಸಿದರು. ಶಾ ನವಾಜ್ ಖಾನ್ ಸಮಿತಿ ಹಾಗೂ ಖೋಸ್ಲಾ ಆಯೋಗದ ವರದಿಗಳೇ ಅಧಿಕೃತವಾದವು ಎಂದು ಅವರು ಹೇಳಿದರು. ಶಿವರಾಜ್ ಪಾಟೀಲರ ಅಭಿಪ್ರಾಯವನ್ನು ಸಂಸದರು ಹಾಗೂ ಸಾರ್ವಜನಿಕರು ಶ್ಲಾಘಿಸಿದ್ದೇ ಅಲ್ಲದೆ ನೇತಾಜಿ ಕಡತಗಳಲ್ಲಿ ಅಡಗಿದ ಸಂಗತಿಗಳನ್ನು ಕೆದಕಲು ಒಬ್ಬರ ಹಿಂದೆ ಒಬ್ಬರಂತೆ ಮಾಹಿತಿ ಹಕ್ಕು ಕಾಯ್ದೆಯ (ಆರ್.ಟಿ.ಐ.) ಮೂಲಕ ಅರ್ಜಿಗಳನ್ನು ಹಾಕಲಾರಂಭಿಸಿದರು.

ಪತ್ರಕರ್ತ ಅನುಜ್ ಧರ್, ಸಯಂತನ್ ಗುಪ್ತ ಹಾಗೂ ‘ಮಿಷನ್ ನೇತಾಜಿ’ಯ ಚಂದ್ರಚೂಡ್ ಘೋಷ್ 2006ರ ಆಗಸ್ಟ್‌ನಲ್ಲಿಯೇ ಗೃಹ ಸಚಿವಾಲಯಕ್ಕೆ ಆರ್.ಟಿ.ಐ.ಗಳನ್ನು ಹಾಕಿ, ಖಾನ್ ಸಮಿತಿ ಹಾಗೂ ಖೋಸ್ಲಾ ಆಯೋಗ ಸಲ್ಲಿಸಿದ ವರದಿಗಳ ದಾಖಲೆಗಳನ್ನು ಒದಗಿಸುವಂತೆ ಕೋರಿದರು. ಸೆಕ್ಷನ್ 8 (1)ರ ಅನ್ವಯ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರವು ಆ ಆರ್.ಟಿ.ಐ.ಗಳನ್ನು ರದ್ದುಪಡಿಸಿತು. ರಷ್ಯಾದಲ್ಲಿ ಬೋಸ್ ಇದ್ದರೆನ್ನುವುದಕ್ಕೆ ಲಭ್ಯವಿದ್ದ ಹಲವು ದಾಖಲೆಗಳನ್ನು ಮೂರೂ ಆಯೋಗಗಳಿಗೆ ಒದಗಿಸಲಾಗಿತ್ತು.

ನೇತಾಜಿ ಸುಭಾಷ್ ಚಂದ್ರ ಬೋಸರು ನಾಪತ್ತೆಯಾದ ಕುರಿತು ಯು.ಎಸ್.ಎಸ್.ಆರ್. ಸರ್ಕಾರ ಹಾಗೂ ರಷ್ಯನ್ ಫೆಡರೇಷನ್ ಜೊತೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನಡೆಸಿದ ಪತ್ರ ವ್ಯವಹಾರದ ಪ್ರತಿಗಳನ್ನು ಒದಗಿಸುವಂತೆ ಅನುಜ್ ಧರ್, ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೂ ಒಂದು ಅರ್ಜಿ ಸಲ್ಲಿಸಿದರು.

ವಿದೇಶಾಂಗ ಸಂಬಂಧದ ಕುರಿತ ಮಾಹಿತಿಯನ್ನು ಹಂಚಿಕೊಳ್ಳುವುದು ಸಾಧ್ಯವಿಲ್ಲ, ಅದು ಆರ್.ಟಿ.ಐ. ಕಾಯ್ದೆ ವ್ಯಾಪ್ತಿಗೆ ಒಳಪಡುವುದಿಲ್ಲ ಎಂಬ ಉತ್ತರವು ಸಚಿವಾಲಯದಿಂದ ಅವರಿಗೆ ಸಿಕ್ಕಿತು. ವಿವಿಧ ಆರ್.ಟಿ.ಐ.ಗಳಿಗೆ ಸರ್ಕಾರ ನೀಡಿದ ಪ್ರತಿಕ್ರಿಯೆಗಳಲ್ಲಿ ಯಾವ ದೇಶದ ಜೊತೆಗಿನ ಸಂಬಂಧದ ಕುರಿತು ಅದು ಪ್ರಸ್ತಾಪಿಸುತ್ತಿದೆ ಎಂಬ ಮಾಹಿತಿಯೂ ಇರಲಿಲ್ಲ.

‘ಖೋಸ್ಲಾ ಸಮಿತಿಯು ಕಲೆಹಾಕಿದ 202 ದಾಖಲೆಗಳ ಪಟ್ಟಿಯನ್ನು ಮಾಡಿ ನಾವು ಅವುಗಳ ಪ್ರತಿಗಳನ್ನು ಒದಗಿಸುವಂತೆ ಕೇಳಿದೆವು. ಆದರೆ, ಆ ದಾಖಲೆಗಳು ಸೂಕ್ಷ್ಮವಾಗಿದ್ದು, ಅವನ್ನು ಬಹಿರಂಗಪಡಿಸಿದರೆ ದೇಶದಲ್ಲಿ, ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕದಡುವ ಆತಂಕವಿದೆ ಎಂದು ಕಾರಣ ಕೊಟ್ಟರು. ಯಾಕೆ ಅಂಥ ಸಮಸ್ಯೆ ಉಂಟಾಗುತ್ತದೆ ಎಂದು ಮಾತ್ರ ಹೇಳಲಿಲ್ಲ’ ಎಂದು ಅನುಜ್ ಆಶ್ಚರ್ಯ ವ್ಯಕ್ತಪಡಿಸಿದ್ದರು.

ಗೃಹ ಕಚೇರಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗೃಹ ಮಂತ್ರಿಗಳಿಂದ ವಿಲೇವಾರಿಯಾದ ಪತ್ರಗಳು, ತೈವಾನ್‌ ಸರ್ಕಾರ ಹಾಗೂ ಬೇಹುಗಾರಿಕಾ ಸಂಸ್ಥೆಯ ನಿರ್ದೇಶಕರ ನಡುವಿನ ಸಂವಹನ, ಭಾರತೀಯ ರಾಷ್ಟ್ರೀಯ ಸೇನೆ ಅರ್ಥಾತ್ ಇಂಡಿಯನ್‌ ನ್ಯಾಷನಲ್‌ ಆರ್ಮಿಯ (ಐ.ಎನ್‌.ಎ.) ಖಜಾನೆ, ಸೇನಾ ಬೇಹುಗಾರಿಕಾ ದಳದ ನಿರ್ದೇಶಕರ ಅಧಿಸೂಚನೆ ಹಾಗೂ ಮಹಾತ್ಮ ಗಾಂಧಿ ಅವರ ಉಲ್ಲೇಖಿತ ಅಭಿಪ್ರಾಯಗಳು ಸೇರಿದಂತೆ ಸಾವಿರಾರು ಪುಟಗಳಷ್ಟು ಮಾಹಿತಿಯನ್ನು ಒಳಗೊಂಡ 110 ದಾಖಲೆಗಳು ನೇತಾಜಿ ನಾಪತ್ತೆಗೆ ಸಂಬಂಧಿಸಿದಂತೆ ಕಡತಗಳಲ್ಲಿ ಇವೆ.

ನೇತಾಜಿ ನಾಪತ್ತೆ ಕುರಿತು ಪ್ರಧಾನಿ ಕಚೇರಿಯ ವಶದಲ್ಲಿರುವ ದಾಖಲೆಗಳನ್ನು ಜನರಿಗೆ ದೊರೆಯುವಂತೆ ಮಾಡಬೇಕು ಎಂದು ಆರ್‌.ಟಿ.ಐ. ಹೋರಾಟಗಾರ ಸುಭಾಷ್‌ ಚಂದ್ರ ಅಗರ್‌ವಾಲ್‌ 2013ರಿಂದ ಪ್ರಯತ್ನಿಸುತ್ತಲೇ ಇದ್ದಾರೆ. ಅವರ ಅರ್ಜಿಗಳಿಗೆ ಪ್ರಧಾನಿ ಕಚೇರಿ ತಡವಾಗಿ ನೀಡಿದ ಪ್ರತಿಕ್ರಿಯೆ ಹೀಗಿತ್ತು: ‘ಈ ಕಡತಗಳಲ್ಲಿ ಇರುವ ದಾಖಲೆಗಳನ್ನು ಜಾಹೀರುಗೊಳಿಸಿದರೆ ವಿದೇಶಗಳೊಟ್ಟಿಗಿನ ಸಂಬಂಧ ಹಾಳಾಗುವ ಆತಂಕವಿದೆ. ಆದ್ದರಿಂದ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಈ ದಾಖಲೆಗಳನ್ನು ಒಳಪಡಿಸಿಲ್ಲ’.

ಒಟ್ಟು 41 ಗುಪ್ತ ಕಡತಗಳಲ್ಲಿ ಪ್ರಧಾನಿ ಕಚೇರಿಯ ಪ್ರಕಾರ ಐದು ಮಹತ್ವದ ಗುಟ್ಟುಗಳಿವೆ. ಬೋಸ್‌ ಅವರ ಪತ್ನಿ ಎಮಿಲಿ ಶೆಂಕ್ಲ್ ಜರ್ಮನಿಯಲ್ಲಿ 1996ರಲ್ಲಿ ಮೃತಪಟ್ಟಾಗ ನಡೆದ ಅಂತಿಮ ಸಂಸ್ಕಾರದ ಬಗೆಗಿನ ವಿವರ ಮೊದಲ ಗುಟ್ಟು. ಬೋಸ್‌ ಅವರ ಪತ್ನಿ ಹಾಗೂ ಮಗಳಿಗೆ ಸಂಬಂಧಿಸಿದ ಇನ್ನೊಂದು ಕಡತ ಎರಡನೇ ಪ್ರಮುಖ ಗುಟ್ಟು. ಭಾರತ ರತ್ನ ಕೊಡುವ ಪ್ರಸ್ತಾಪವನ್ನು ಹೊಸಕಿಹಾಕಿದ ಬಗೆ ಮತ್ತೊಂದು ಗುಟ್ಟು. ಐ.ಎನ್‌.ಎ.ಗೆ ಸೇರಿದ ಆಸ್ತಿಗಳನ್ನು ಬಹಳ ಹಿಂದೆಯೇ ಮಾರಾಟ ಮಾಡಿದ್ದು ಕೂಡ ಗುಟ್ಟೇ ಹೌದು.

ಭಾರತಕ್ಕೆ ಅಸ್ಥಿಯನ್ನು ಸ್ಥಳಾಂತರಿಸುವ ವಿಷಯದಲ್ಲಿ ನಡೆದಿರುವ ಸಂವಹನದ ದಾಖಲೆಗಳೂ ಗುಟ್ಟೇ (ಈ ದಾಖಲೆಗಳ ಪಟ್ಟಿಯ ಪ್ರತಿ ನನ್ನ ಬಳಿ ಇದೆ). ಒಂದು ವೇಳೆ 1945ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ಬೋಸ್‌ ಮೃತಪಟ್ಟಿದ್ದು ನಿಜವೇ ಆಗಿದ್ದಿದ್ದರೆ, ಸರ್ಕಾರವು ಬೋಸ್‌ ಕುಟುಂಬಕ್ಕೆ ಸಂಬಂಧಿಸಿದ ಸಂವಹನದ ಕುರಿತ ದಾಖಲೆಗಳನ್ನು ಗುಟ್ಟಾಗಿ ಇಡುತ್ತಾ ಬಂದಿರುವುದಾದರೂ ಏಕೆ? ಜರ್ಮನಿಯಲ್ಲಿ ಇದ್ದ ಬೋಸರ ಪತ್ನಿ ಹಾಗೂ ಮಗಳ ವಿಷಯವೂ ಯಾಕೆ ಗುಟ್ಟಾಗಬೇಕು?

ಗೃಹ ಸಚಿವಾಲಯದಲ್ಲಿ ನೇತಾಜಿ ಅವರಿಗೆ ಸಂಬಂಧಿಸಿದ ಸುಮಾರು 70,000 ಪುಟಗಳಷ್ಟು ಮಾಹಿತಿ ಇದೆ. ಸತತ ಪ್ರಯತ್ನಗಳಿಂದ ಆ ಪೈಕಿ ಸುಮಾರು 10,000 ಪುಟಗಳಷ್ಟು ಮಾಹಿತಿ ಸಂಗ್ರಹಿಸುವಲ್ಲಿ ಅನುಜ್‌ ಧರ್‌ ಯಶಸ್ವಿಯಾದರು.

ನೇತಾಜಿ ನಾಪತ್ತೆಗೆ ಸಂಬಂಧಿಸಿದ ಪ್ರಮುಖ ಕಡತಗಳು ನಾಶವಾದ ಕುರಿತೂ ವ್ಯಾಪಕವಾಗಿ ವರದಿಗಳು ಪ್ರಕಟವಾಗಿವೆ. ಖೋಸ್ಲಾ ಹಾಗೂ ಮುಖರ್ಜಿ ಆಯೋಗಗಳಿಗೆ ಅವು ಲಭ್ಯವಾಗದೇ ಇರಲೂ ಅದೇ ಕಾರಣ. ಎರಡೂ ಆಯೋಗಗಳ ವರದಿಗಳು ಹಾಗೂ ಪ್ರಧಾನಿ ಕಚೇರಿಯ ಲಭ್ಯ ದಾಖಲೆಗಳಲ್ಲಿ ಅನುಜ್‌ ಧರ್‌ ಅವರು ಆರ್‌.ಟಿ.ಐ. ಮೂಲಕ ಒಂದು ಮಾಹಿತಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದರು. ಸುಭಾಷ್‌ ಚಂದ್ರ ಬೋಸರ ಸಾವಿಗೆ ಕಾರಣವಾದ ಪರಿಸ್ಥಿತಿಗಳಿಗೆ ಸಂಬಂಧಿಸಿದ ಕಡತವೊಂದನ್ನು 1956ರಲ್ಲಿ ಪ್ರಧಾನಿ ಅವರ ಕಾರ್ಯದರ್ಶಿಯು ಹೊರತೆಗೆದಿದ್ದರು ಎನ್ನುವುದೇ ಆ ಮಹತ್ವದ ಮಾಹಿತಿ.

‘ಈ ರೀತಿ ಕಡತಗಳನ್ನು ನಾಶಪಡಿಸುವುದು ಕಾನೂನುಬಾಹಿರ. ದಾಖಲೆ ನಿರ್ವಹಣೆ ಪ್ರಕ್ರಿಯೆ ನಿಯಮಾವಳಿಯ ಉಲ್ಲಂಘನೆ ಇದು. ಚಾರಿತ್ರಿಕ ಮಹತ್ವ ಇರುವ, ಅದರಲ್ಲೂ ಜನಮಾನಸವನ್ನು ಆವರಿಸಿರುವ ವಿಷಯದ ಬಗೆಗಿನ ಕಡತಗಳನ್ನು 25 ವರ್ಷಗಳವರೆಗೆ ಆಯಾ ಕಚೇರಿಯಲ್ಲಿ ಸಂರಕ್ಷಿಸಿಡಬೇಕು. ಆಮೇಲೆ ಅವನ್ನು ರಾಷ್ಟ್ರೀಯ ಪತ್ರಾಗಾರಕ್ಕೆ ಕಳುಹಿಸಿಕೊಡಬೇಕಾದದ್ದು ನ್ಯಾಯ’ ಎನ್ನುವುದು ಅನುಜ್‌ ಧರ್‌ ಅಭಿಪ್ರಾಯ. ಆರ್‌.ಟಿ.ಐ. ಅರ್ಜಿಗಳನ್ನು ಹಾಕುವುದರ ಜೊತೆಗೆ ಕೆಲವರು ಸತ್ಯಶೋಧನೆಗಾಗಿ ಮಾಹಿತಿ ಕಲೆಹಾಕಲು ಸ್ವತಂತ್ರವಾಗಿ ಭಾರತದ ಹೊರಗಿನ ಸರ್ಕಾರಗಳು ಹಾಗೂ ಸಂಸ್ಥೆಗಳನ್ನು ಸಂಪರ್ಕಿಸಿದರು.

1964ರ ನವೆಂಬರ್‌ನಲ್ಲಿ ಡಾ. ಸತ್ಯನಾರಾಯಣನ್‌ ಸಿನ್ಹ ತೈವಾನ್‌ಗೆ ಹೋಗಿ, ವಿಮಾನ ಅಪಘಾತದಲ್ಲಿ ಬೋಸ್‌ ಮೃತಪಟ್ಟಿದ್ದಕ್ಕೆ ಏನಾದರೂ ಆಧಾರವಿದೆಯೇ ಎಂದು ಹುಡುಕಿದರು. ಅವರಿಗೆ ಸಿಕ್ಕಿದ ಮಹತ್ವದ ಮಾಹಿತಿಯು ಆಮೇಲೆ ಖೋಸ್ಲಾ ಸಮಿತಿಗೆ ಹಸ್ತಾಂತರವಾಯಿತು. ಅನುಜ್‌ ಧರ್‌ ಅವರ ಮನವಿಯೊಂದಕ್ಕೆ 2003ರಲ್ಲಿ ತೈಪೆ ಮೇಯರ್‌ ಕಚೇರಿ ಪ್ರತಿಕ್ರಿಯೆ ನೀಡಿತು. ಅದರ ಪ್ರಕಾರ, ‘ತೈಪೆ ನಗರ ಪತ್ರಾಗಾರದಲ್ಲಿ ಇರುವ ಐತಿಹಾಸಿಕ ದಾಖಲೆಗಳಲ್ಲಿ ಆ ದಿನ ತೈಪೆಯಲ್ಲಿ ವಿಮಾನ ಅಪಘಾತ ನಡೆದಿತ್ತು ಎನ್ನಲು ಯಾವುದೇ ಆಧಾರಗಳಿಲ್ಲ’. ಕೇಂದ್ರ ಬೇಹುಗಾರಿಕಾ ದಳ (ಸಿ.ಐ.ಎ.)ದ ದಾಖಲೆಗಳಿಂದ ಧರ್‌ ಅವರಿಗೆ ಇನ್ನೊಂದು ಮಹತ್ವದ ಸಂಗತಿ ಗೊತ್ತಾಯಿತು. ಸುಭಾಷ್‌ ಇನ್ನೂ ಬದುಕಿದ್ದು, ಯು.ಎಸ್‌.ಎಸ್‌.ಆರ್‌.ನಲ್ಲಿ ಇದ್ದಾರೆ ಎನ್ನುವ ಗುಸುಗುಸು1950ರಲ್ಲಿ ದಟ್ಟವಾಗಿತ್ತು ಎಂದು ಸಿ.ಐ.ಎ. ದಾಖಲೆ ಸ್ಪಷ್ಟಪಡಿಸಿತು.

ಬ್ರಿಟಿಷ್‌ ಸರ್ಕಾರವು ಬೋಸ್‌ ಅವರಿಗೆ ‘ಯುದ್ಧಾಪರಾಧಿ’ ಎಂಬ ಹಣೆಪಟ್ಟಿ ಕಟ್ಟಿತ್ತು. ಯಾಕೆಂದರೆ, ದೊರೆತನ ಹಾಗೂ ಸರ್ವಾಧಿಕಾರವನ್ನು ಬೋಸ್‌ ವಿರೋಧಿಸಿದ್ದರು. ಅಮೆರಿಕ ಕೂಡ ಯುದ್ಧಾಪರಾಧಿಗಳ ಪಟ್ಟಿಯಲ್ಲಿ ಬೋಸ್‌ ಹೆಸರನ್ನು ಸೇರಿಸಿತ್ತು. ದೀರ್ಘ ಕಾಲದವರೆಗೆ ಬೋಸ್‌ ಅವರನ್ನು ಭಾರತದಲ್ಲಿಯೂ ಯುದ್ಧಾಪರಾಧಿ ಎಂದೇ ಕರೆಯಲಾಗುತ್ತಿತ್ತು. ನಾನು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಒಂದು ಆರ್‌.ಟಿ.ಐ. ಅರ್ಜಿ ಸಲ್ಲಿಸಿ, ಭಾರತದಲ್ಲಿ ಯುದ್ಧಾಪರಾಧಿಗಳ ಪಟ್ಟಿಯಿಂದ ಬೋಸ್‌ ಅವರ ಹೆಸರನ್ನು ತೆಗೆಯಲಾಯಿತೆ ಎಂದು ಪ್ರಶ್ನಿಸಿದೆ. ನನ್ನ ಪ್ರಶ್ನೆಗೆ ನೇರವಾಗಿ ಉತ್ತರಿಸದ ಸಚಿವಾಲಯ, ಆಂತರಿಕ ಭದ್ರತೆಯ ಕಾನೂನು ವಿಭಾಗಕ್ಕೆ ಆ ಪ್ರಶ್ನೆಯನ್ನು ಕಳುಹಿಸಿಕೊಟ್ಟಿರುವುದಾಗಿ ಪ್ರತಿಕ್ರಿಯಿಸಿತು. ಅದರರ್ಥ, ಬೋಸ್‌ ಕುರಿತ ಕಡತಗಳು ಆಂತರಿಕ ಭದ್ರತಾ ಇಲಾಖೆಯಲ್ಲಿವೆ.

ನೇತಾಜಿ ಅವರ ಹೆಸರನ್ನು ಯುದ್ಧಾಪರಾಧಿಗಳ ಪಟ್ಟಿಯಿಂದ ತೆಗೆಯುವಂತೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿಶ್ವಸಂಸ್ಥೆಯನ್ನು ಸಂಪರ್ಕಿಸಿತ್ತೆ?, ಪ್ರತಿಯಾಗಿ ವಿಶ್ವಸಂಸ್ಥೆ ಏನು ಉತ್ತರ ನೀಡಿತು ಎಂದು ಇನ್ನೊಂದು ಆರ್‌.ಟಿ.ಐ. ಹಾಕಿದೆ. ಆರ್‌.ಟಿ.ಐ. ಕಾಯ್ದೆ ಸೆಕ್ಷನ್‌ 8 (1) (ಎ) ಪ್ರಕಾರ ಆ ಮಾಹಿತಿ ನೀಡಲು ಸಾಧ್ಯವಿಲ್ಲ ಎಂಬ ಉತ್ತರ ನನಗೆ ಬಂತು. ನಾನು ಕೇಳಿದ ಇದೇ ಪ್ರಶ್ನೆಯನ್ನು 1956ರಲ್ಲೇ ನೇತಾಜಿ ಅವರ ಸ್ನೇಹಿತ ಮುತ್ತುರಾಮಲಿಂಗ ತೇವರ್‌ ಅವರು ನೆಹರು ಸರ್ಕಾರಕ್ಕೆ ಹಾಕಿದ್ದರು. ಬ್ರಿಟನ್ನರು ಭಾರತದ ಆಚಿನ ಯುದ್ಧಾಪರಾಧಿ ಎಂದೇ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.

1963ರ ನವೆಂಬರ್‌ 22ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್‌ ಎಫ್‌. ಕೆನಡಿ ಅವರ ಹತ್ಯೆ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ನಡೆದಿತ್ತು. 1992ರಲ್ಲಿ ಜನಪ್ರಿಯ ಸಿನಿಮಾ ‘ಜೆಎಫ್‌ಕೆ’ ತೆರೆಕಂಡ ಮೇಲೆ ಆ ಹತ್ಯೆಯ ಕುರಿತು ಸಾರ್ವಜನಿಕರಲ್ಲಿ ಆಸಕ್ತಿ ಕೆರಳಿತು. ಸಿನಿಮಾ ಮೂಡಿಸಿದ ಕುತೂಹಲಕ್ಕೆ ಮಣಿದು ಅಮೆರಿಕನ್‌ ಕಾಂಗ್ರೆಸ್‌ ಆಗ ‘ಅಧ್ಯಕ್ಷ ಜಾನ್‌ ಎಫ್‌. ಕೆನಡಿ ಹತ್ಯೆ ಕುರಿತ ದಾಖಲೆಗಳ ಸಂಗ್ರಹ ಕಾಯ್ದೆ–1992’ ಅನ್ನು ಜಾರಿಗೆ ತಂದಿತು. ಆ ಹತ್ಯೆಗೆ ಸಂಬಂಧಿಸಿದಂತೆ ಸ್ಥಳೀಯ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಇದ್ದ, ಖಾಸಗಿ ಜನರು ಹಾಗೂ ಸಂಸ್ಥೆಗಳಿಂದ ಲಭ್ಯವಾಗಿದ್ದ ಎಲ್ಲಾ ಕಡತಗಳನ್ನೂ ಸಾರ್ವಜನಿಕರಿಗೆ ಮುಕ್ತವಾಗಿ ಒದಗಿಸಿತು.

1948ರಲ್ಲಿ ಗಾಂಧಿ ಹತ್ಯೆಯಾಗುವ ಕೆಲವು ದಿನಗಳ ಮೊದಲಿನ ಸಂದರ್ಭ. ದೇಶ ವಿಭಜನೆಯಿಂದ ರೋಸಿಹೋಗಿದ್ದ ಗಾಂಧಿ, ಅಂಥ ಪರಿಸ್ಥಿತಿಯನ್ನು ನಿಭಾಯಿಸಲು ತಮ್ಮ ಇನ್ನೊಬ್ಬ ಮಾನಸಪುತ್ರ ಸುಭಾಷ್‌ ಇರಬೇಕಿತ್ತು ಎಂದು ನೆಹರೂ, ಪಟೇಲ್‌ ಇಬ್ಬರಲ್ಲೂ ಭಾವುಕರಾಗಿ ಹೇಳಿದ್ದರು. ಆಗ ಅಲ್ಲಿದ್ದ ಕಾಂಗ್ರೆಸಿಗರೊಬ್ಬರು, ಸುಭಾಷ್‌ ಮೃತಪಟ್ಟಿರುವ ಸಂಗತಿಯನ್ನು ನೆನಪಿಸಿದಾಗ ಗಾಂಧಿ, ‘ಅವರು ರಷ್ಯಾದಲ್ಲಿ ಇದ್ದಾರೆ, ಮೃತಪಟ್ಟಿಲ್ಲ’ ಎಂದು ಏರಿದ ದನಿಯಲ್ಲಿ ಆ ಕಾಂಗ್ರೆಸಿಗರಿಗೆ ಪ್ರತಿಕ್ರಿಯಿಸಿದ್ದರು.

ನೇತಾಜಿ ನಾಪತ್ತೆಯಾಗಿ ಏಳು ದಶಕಗಳು ಉರುಳಿವೆ. ಬಹುತೇಕ ದೇಶಗಳಲ್ಲಿ ಪ್ರಜಾಪ್ರಭುತ್ವ ಬಂತು. ಬದಲಾದ ಕಾಲದಲ್ಲಿ ಯಾವುದೋ ಹಳೆಯ ಮಾಹಿತಿ ಜಾಹೀರು ಮಾಡಿದರೆ ವಿದೇಶಗಳ ಜೊತೆಗಿನ ಬಾಂಧವ್ಯ ಹದಗೆಡುತ್ತದೆ ಎಂಬ ವಾದಕ್ಕೆ ಅರ್ಥವಿಲ್ಲ. ಕಡತಗಳನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡಿದರೆ 1945ರಿಂದ ಇಲ್ಲಿಯವರೆಗೆ ನೇತಾಜಿ ನಾಪತ್ತೆಯ ಕುರಿತು ಇರುವ ಅನೇಕ ಊಹಾಪೋಹಗಳು ಮಾಯವಾಗಿ, ನಡೆದದ್ದೇನು ಎನ್ನುವುದರ ಸ್ಪಷ್ಟ ಚಿತ್ರಣ ಸಿಗುತ್ತದೆ.

ರಷ್ಯಾ, ಬ್ರಿಟನ್‌, ಜಪಾನ್‌, ಅಮೆರಿಕ ಸೇರಿದಂತೆ ನೇತಾಜಿ ನಾಪತ್ತೆಗೆ ಯಾವ್ಯಾವ ಸರ್ಕಾರಗಳಲ್ಲಿ ದಾಖಲೆಗಳು ಲಭ್ಯ ಇವೆಯೋ ಅವನ್ನೆಲ್ಲಾ ಭಾರತ ಸರ್ಕಾರ ಪಡೆದುಕೊಳ್ಳಬೇಕು. ಅವುಗಳ ಜೊತೆಗೆ ಈಗ ಲಭ್ಯವಿರುವ ನೇತಾಜಿ ಸಂಬಂಧಿ ಕಡತಗಳನ್ನು ಸಾರ್ವಜನಿಕರಿಗೆ ಸಿಗುವಂತೆ ಮಾಡಬೇಕು. ಇಡೀ ದೇಶ ನೇತಾಜಿ ಮರಣಕ್ಕೆ ಕಾರಣಗಳೇನು ಎಂದು ಅರಿಯಲು ಉತ್ಸುಕವಾಗಿದೆ.

(ಅಂಕಣಕಾರ್ತಿ ಚೂಡಿ ಶಿವರಾಂ ಹಿರಿಯ ಪತ್ರಕರ್ತೆ. ಅವರ ಲೇಖನಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿದೇಶಿ ವಿಶ್ವವಿದ್ಯಾಲಯಗಳು ಇವರ ಬರಹಗಳನ್ನು ಆಕರವಾಗಿಯೂ ಬಳಸಿಕೊಂಡಿವೆ. ಈ ಬರಹವು ಪ್ರಜಾವಾಣಿಯ ‘ಈ ಭಾನುವಾರ’ ಪುಟದಲ್ಲಿ ಅಕ್ಟೋಬರ್ 11, 2015ರಂದು ಮೊದಲ ಬಾರಿಗೆ ಪ್ರಕಟವಾಗಿತ್ತು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT