ಲೋಟಸ್, ಹಯಾತ್ ಬೆಂಗಳೂರು ಹಾಗೂ ಕ್ರಿಸಾಂತಿಮಮ್ ಸಹಯೋಗದೊಂದಿಗೆ ಆರ್ಟ್ ಮಂತ್ರಂ ಆಯೋಜಿಸಿದ್ದ ಮಹಾ ಕಾರ್ತಿಕ ಆಚರಣೆ ಭಾರತೀಯ ಹಾಗೂ ಜಪಾನಿ ಕಲೆ, ಪಾಕಕಲೆ, ಸಂಗೀತ, ನೃತ್ಯ ಹಾಗೂ ಉಡುಗೆ ತೊಡುಗೆಗಳ ಸಂಸ್ಕೃತಿಯನ್ನು ಪರಿಚಯಿಸಿಕೊಳ್ಳುವ ಅವಕಾಶವನ್ನು ಬೆಂಗಳೂರಿಗರಿಗೆ ಒದಗಿಸಿತು.
ಬೆಂಗಳೂರಿನಲ್ಲಿರುವ ಜಪಾನ್ನ ರಾಯಭಾರಿ ಕಚೇರಿಯ ಮುಖ್ಯಸ್ಥ ನೊಬುವಾಕಿ ಯಮಮೊಟ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ನ ಉಪ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿದ್ದರು. ಉದ್ಘಾಟನೆಯ ಬಳಿಕ 16 ಮಂದಿ ಜಪಾನಿ ಕಲಾವಿದರಿಂದ ಜಪಾನಿ ವೃಂದಗಾನ ಆಕರ್ಷಕವಾಗಿ ಮೂಡಿಬಂತು. ಕನ್ನಡದ ‘ಸಂತೋಷಕ್ಕೆ ಹಾಡು ಸಂತೋಷಕ್ಕೆ' ಹಾಡನ್ನು ನುಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಬೆಂಗಳೂರಿನ ಒಡಿಸ್ಸಿ ನೃತ್ಯ ಕೇಂದ್ರದ ದಏವಜಾನಿ ಸಏನ್ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನ, ಭಾರತೀಯ ಮತ್ತು ಜಪಾನಿ ಕಲಾವಿದರಿಂದ ಸಾಂಪ್ರದಾಯಿಕ ಕಿಮೊನೊ ಹಾಗೂ ಸೀರೆಗಳ ಪ್ರದರ್ಶನವಿತ್ತು. ಎರಡೂ ರಾಷ್ಟ್ರಗಳ ಆಹಾರ ವೈವಿಧ್ಯವೂ ಈ ಸಾಂಸ್ಕೃತಿಕ ಮೇಳದಲ್ಲಿ ಲಭ್ಯವಿತ್ತು.
ಲೋಟಸ್ ಕ್ರಿಸಾಂತಿಮಮ್ ಟ್ರಸ್ಟ್ ಭಾರತ ಹಾಗೂ ಜಪಾನ್ ದೇಶಗಳ ಸಂಸ್ಕೃತಿಗಳನ್ನು ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಈ ಮೇಳವನ್ನು ಆಯೋಜಿಸುತ್ತಿದೆ.