ನವದೆಹಲಿ, (ಪಿಟಿಐ): ಆರ್ಥಿಕ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಭಾರಿ ಪ್ರಮಾಣದ ಬದಲಾವಣೆ ಆಗಿರುವುದರಿಂದ ಕಾರ್ಮಿಕರು ಮತ್ತು ಆಡಳಿತ ವರ್ಗದ ಮಧ್ಯೆ ಆಗಿರುವ ಹಳೆಯ ಒಪ್ಪಂದಗಳನ್ನು ಪ್ರಸಕ್ತ ಸನ್ನಿವೇಶದಲ್ಲಿ ಪರಾಮರ್ಶಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಬದಲಾದ ಕೈಗಾರಿಕಾ ಸನ್ನಿವೇಶದಲ್ಲಿ ನಿಯಮ ಬಾಹಿರವಾಗಿ ಕಾರ್ಮಿಕ ವ್ಯವಸ್ಥೆಯ ನಿರ್ವಹಣೆ ಎಂಬ ವಿಚಾರವನ್ನೂ ಪರಾಮರ್ಶೆಗೆ ಒಳಪಡಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಡಿ.ಕೆ.ಜೈನ್ ಮತ್ತು ಎ.ಕೆ.ಗಂಗೂಲಿ ಅವರನ್ನು ಒಳಗೊಂಡ ಪೀಠ ತಿಳಿಸಿದೆ. ಯಾವುದೇ ಕಾರ್ಮಿಕ ವಿವಾದ ಬಗೆಹರಿಸಬೇಕಾದರೂ ಔದ್ಯಮಿಕ ಶಾಂತಿ ಮತ್ತು ಆರ್ಥಿಕ ನ್ಯಾಯ ಎರಡನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ತರಬೇತಿಯಲ್ಲಿದ್ದ ಅಧಿಕಾರಿಗಳಿಗೆ ಕಾರ್ಮಿಕರ ಕೆಲಸವನ್ನು ಮಾಡುವಂತೆ ಸೂಚಿಸಿದ್ದ ಸಿಮೆನ್ಸ್ ಕಂಪೆನಿಯ ಆಡಳಿತ ವರ್ಗದ ಕ್ರಮ ಅನುಚಿತ ಎಂಬ ಬಾಂಬೈ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ಪೀಠ ಮೇಲಿನಂತೆ ತಿಳಿಸಿದೆ. ಕಾರ್ಮಿಕ ಸಂಘಟನೆಯ ಜತೆ 1982ರಲ್ಲಿ ಆಗಿರುವ ಒಪ್ಪಂದವನ್ನು ಉಲ್ಲಂಘಿಸಿರುವುದು ತಪ್ಪು ಎಂಬ ಬಾಂಬೈ ಹೈಕೋರ್ಟ್ ತೀರ್ಪನ್ನು ಪೀಠ ರದ್ದುಪಡಿಸಿದೆ.