ಬೆಂಗಳೂರು: `ಇಲಾಖಾವಾರು ಪ್ರತ್ಯೇಕ ನೀತಿ ನಿಯಮಗಳು ದೇಶದ ಅಭಿವೃದ್ಧಿಗೆ ಪೂರಕವಾಗಿಲ್ಲ. ದೇಶದ ಆರ್ಥಿಕ ಬೆಳವಣಿಗೆಗೆ ವೇಗೋತ್ಕರ್ಷ ನೀಡಲು ಸಮಗ್ರ ನೀತಿಗಳನ್ನು ರೂಪಿಸಿ ಜಾರಿಗೊಳಿಸಬೇಕಾಗಿದೆ' ಎಂದು ಬಯೋಕಾನ್ ಕಂಪೆನಿಯ ಮುಖ್ಯಸ್ಥೆ ಡಾ.ಕಿರಣ್ ಮಜುಂದಾರ್ ಷಾ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಹತ್ತಾರು ನಿರ್ಬಂಧಗಳಿಂದಾಗಿ ಕೃಷಿ ಮತ್ತು ಔಷಧ ಕ್ಷೇತ್ರಗಳಲ್ಲಿನ ಸಂಶೋಧನಾ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ' ಎಂದರು.
`ವಂಶವಾಹಿ ತಿರುಚಿದ (ಜಿಎಂ) ಬೆಳೆಗಳ ಕ್ಷೇತ್ರ ಪ್ರಯೋಗದ ಮೇಲೆ ನಿಷೇಧ ವಿಧಿಸಲಾಗಿದೆ. ಕ್ಲಿನಿಕಲ್ ಟ್ರಯಲ್ ನಡೆಸುವುದರ ಮೇಲೂ ನಿಬರ್ಂಧ ಹೇರಲಾಗಿದೆ' ಎಂದು ಅವರು ವಿಷಾದಿಸಿದರು.
`ಒಂದೊಂದು ಇಲಾಖೆ ಒಂದೊಂದು ಕಾನೂನು ಮಾಡುವ ಬದಲು ಸಂಬಂಧಪಟ್ಟ ಇಲಾಖೆಗಳ ಸಚಿವರು ಒಂದೆಡೆ ಸೇರಿ ಚರ್ಚಿಸಿ ಸಮಗ್ರವಾದ ನೀತಿಗಳನ್ನು ನಿರೂಪಿಸಬೇಕು' ಎಂದು ಹೇಳಿದರು.
`ಜೈವಿಕ ತಂತ್ರಜ್ಞಾನದಿಂದ (ಬಿಟಿ) ಮಾತ್ರವೇ ಆಹಾರ ಭದ್ರತೆ ಸಾಧ್ಯ. ಹೀಗಾಗಿ ಬಿಟಿಯಿಂದ ಮತ್ತೊಂದು ಹಸಿರು ಕ್ರಾಂತಿ ಉಂಟಾಗಲಿದೆ. ಪರೀಕ್ಷೆಯಿಂದ ಫಲಿತಾಂಶ ಪ್ರಕಟಣೆವರೆಗೆ ಸಂಶೋಧನೆಯ ಎಲ್ಲ ಚಟುವಟಿಕೆಗಳು ಪಾರದರ್ಶಕವಾಗಿರಬೇಕು. ವಂಚನೆ ಮಾಡುವ ಕಂಪೆನಿಗಳನ್ನು ಕಟ್ಟುನಿಟ್ಟಾಗಿ ಶಿಕ್ಷಿಸಬೇಕು' ಎಂದು ಅವರು ನುಡಿದರು.