ಹವಾನ (ಪಿಟಿಐ): ಈಗಾಗಲೇ ತೈಲ ಶ್ರೀಮಂತ ದೇಶ ಕ್ಯೂಬಾದೊಂದಿಗೆ ಉತ್ತಮ ರಾಜಕೀಯ ಸಂಬಂಧ ಹೊಂದಿರುವ ಭಾರತ, ಆರ್ಥಿಕ ಯೋಜನೆಗಳ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡುವುದು ಎಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಇಲ್ಲಿ ಭಾನುವಾರ ತಿಳಿಸಿದರು.
ಕ್ಯೂಬಾ ಪ್ರವಾಸದಲ್ಲಿರುವ ಅಲ್ಲಿನ ರಾಷ್ಟ್ರೀಯ ಸಂಸತ್ನ ಸ್ಪೀಕರ್ ರಿಕಾರ್ಡೊ ಅರ್ಲ್ಕಾನ್ ಅವರ ಜೊತೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. `ಉಭಯ ದೇಶಗಳು ಉತ್ತಮ ರಾಜಕೀಯ ಬಾಂಧವ್ಯ ಹೊಂದಿವೆ. ಮುಂದಿನ ದಿನಗಳಲ್ಲಿ ಆರ್ಥಿಕ ಸಂಬಂಧವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬೇಕಾಗಿದೆ~ ಎಂದರು.
ಇದೇ ಸಂದರ್ಭದಲ್ಲಿ ಕ್ಯೂಬಾದ ವಿದೇಶಾಂಗ ಸಚಿವ ಬ್ರುನೊ ರೋಡ್ರಿಗಸ್ ಅವರೊಂದಿಗೆ ದ್ವಿಪಕ್ಷಿಯ ಮಾತುಕತೆಗಳ ಕುರಿತು ಚರ್ಚೆ ನಡೆಸಿದರು. ವಿವಿಧ ಒಪ್ಪಂದಗಳಿಗೆ ಉಭಯತ್ರರು ಸಹಿ ಹಾಕಿದರು.
ಕ್ಯೂಬಾದಲ್ಲಿನ ಇತ್ತೀಚಿನ ಬೆಳವಣಿಗೆಗಳು ಆಶಾದಾಯಕವಾಗಿವೆ. ಅಧ್ಯಕ್ಷ ರೌಲ್ ಕ್ಯಾಸ್ಟ್ರೊ ಅವರ ಸುಧಾರಣಾವಾದಿ ಕಾರ್ಯಗಳು ಸ್ವಾಗತಾರ್ಹವಾದವು ಎಂದು ಕೃಷ್ಣ ಪ್ರಶಂಸೆ ವ್ಯಕ್ತಪಡಿಸಿದರು.
ಇದೇ ವೇಳೆ ರೊಡ್ರಿಗಸ್ ಅವರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.
ಕ್ರೀಡಾ ಕ್ಷೇತ್ರ, ಜೈವಿಕ ತಂತ್ರಜ್ಞಾನ , ಔಷಧಿ, ಹೈಡ್ರೋಕಾರ್ಬನ್ಸ್ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಕ್ಯೂಬಾ ಉತ್ತಮ ವಾಣಿಜ್ಯ ಸಂಬಂಧ ಹೊಂದಿದೆ. ವಾರ್ಷಿಕ 300 ದಶಲಕ್ಷ ಡಾಲರ್ನಷ್ಟು ವಹಿವಾಟು ನಡೆಯುತ್ತಿದೆ. ಮುಖ್ಯವಾಗಿ ತೈಲ ರಫ್ತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ರೊಡ್ರಿಗಸ್ ವಿವರಿಸಿದರು.