ನವದೆಹಲಿ (ಪಿಟಿಐ): ಕಳೆದ ಒಂದು ವರ್ಷದಲ್ಲಿ ದೇಶದ ಆರ್ಥಿಕ ಪರಿಸ್ಥಿತಿತೀವ್ರವಾಗಿ ವಿಷಮಿಸಿದ್ದು, ಕುಸಿಯುತ್ತಿರುವ ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಬಜೆಟ್ನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಹೇಳಿದ್ದಾರೆ.
ಆರ್ಥಿಕ ಮಾನದಂಡಗಳಲ್ಲಿ ಆಗಿರುವ ಕುಸಿತವನ್ನು ತಡೆಯಲು ಬಜೆಟ್ನಲ್ಲಿ ಆದ್ಯತೆ ನೀಡಲಾಗುವುದು. 2012-13ನೇ ಸಾಲಿನ ಬಜೆಟ್ ಸಿದ್ಧತೆಗಳು ಆರಂಭಗೊಂಡಿದ್ದು, ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಆಗಿರುವ ತ್ವರಿತ ಬೆಳವಣಿಗೆಗಳು ಮತ್ತು ಅವು ದೇಶದ ಆರ್ಥಿಕ ವೃದ್ಧಿ ದರದ ಮೇಲೆ ಬೀರುತ್ತಿರುವ ಪರಿಣಾಮಗಳು ಆಶ್ಚರ್ಯಕರ ರೀತಿಯಲ್ಲಿವೆ ಎಂದರು. ಇಲ್ಲಿ ನಡೆದ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) 84ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸದ್ಯದ ಪರಿಸ್ಥಿತಿಯೇ ಮುಂದುವರೆದರೆ ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ `ಜಿಡಿಪಿ~ಯು ಶೇ 7.5ಕ್ಕಿಂತ ಕೆಳಮಟ್ಟಕ್ಕೆ ಕುಸಿತ ಕಾಣಲಿದೆ. ಜತೆಗೆ ಶೇ 4.6ರಷ್ಟು ವಿತ್ತೀಯ ಕೊರತೆ ಸರಾಸರಿ ಕಾಯ್ದುಕೊಳ್ಳುವುದು ಕಷ್ಟ ಎಂದು ವಿಶ್ಲೇಷಿಸಿದ್ದಾರೆ.
ಸಬ್ಸಿಡಿಗೆ ಹೆಚ್ಚಿನ ಹಣ ವ್ಯಯವಾಗುತ್ತಿರುವುದು ಮತ್ತು ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರು ವಿಕ್ರಯ ನಿಗದಿತ ಸಮಯದಲ್ಲಿ ಆಗದಿರುವುದು ಆರ್ಥಿಕ ಒತ್ತಡ ಹೆಚ್ಚುವಂತೆ ಮಾಡಿದೆ ಎಂದರು.