ಕನಕಪುರ: ಪ್ರಸ್ತುತ ಸಂದರ್ಭದಲ್ಲಿ ಹೈನುಗಾರಿಕೆ ನಿಶ್ಚಿತ ಲಾಭ ಬರುವಂತಹ ಹಾಗೂ ರೈತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವಂತಹ ಏಕೈಕ ಉದ್ಯಮವಾಗಿದೆ ಎಂದು ಬೆಂಗಳೂರು ಡೈರಿ ನಿರ್ದೇಶಕ ಡಿ.ನಟೇಶ್ ಹೇಳಿದರು.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ಹಾಲು ಒಕ್ಕೂಟ ಹಾಗೂ ಬಸವನ ಬನ್ನಿಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಬಸವನ ಬನ್ನಿಕುಪ್ಪೆ ಗ್ರಾಮದಲ್ಲಿ ಕಾಲು ಮತ್ತು ಬಾಯಿಜ್ವರದ ಲಸಿಕೆ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಹೈನುಗಾರಿಕೆ ರೈತರ ಬಾಳಿಗೆ ಬೆನ್ನೆಲುಬಾಗಿದೆ. ರೈತರು ತಾವು ಸಾಕಿರುವಂತಹ ಜಾನುವಾರಗಳ ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಪಶುಗಳಿಗೆ ಬರುವ ಕಾಲು ಬಾಯಿ ಜ್ವರದ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಇಲಾಖೆ ವತಿಯಿಂದ ನಡೆಸುವ ಲಸಿಕಾ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕೆಂದು ಅವರು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾ ಸುರೇಶ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಬೆಂಗಳೂರು ಡೈರಿಯಿಂದ ದೊರೆಯುವ ವಿಮಾ ಸೌಲಭ್ಯಗಳ ಬಗ್ಗೆ ಅರಿತು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು. ಜಾನುವಾರುಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೆ ರೈತರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತದೆ ಎಂದರು.
ಪಶುವೈದ್ಯಕೀಯ ಸಹಾಯಕ ನಿರ್ದೇಶಕ ಡಾ.ಎಲ್. ವರದ ರಾಜ್ಕುಮಾರ್ ಮಾತನಾಡಿ, ಕಾಲುಬಾಯಿ ಜ್ವರವನ್ನು ತಡೆಗಟ್ಟಲು ತಾಲ್ಲೂಕಿನಾದ್ಯಂತ 30 ದಿನಗಳ ಕಾಲ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಬನ್ನಿಕುಪ್ಪೆ ಗ್ರಾಮದಲ್ಲಿ ಅದಕ್ಕೆ ಚಾಲನೆ ನೀಡಲಾಗಿದೆ. ತಾಲ್ಲೂಕಿನಲ್ಲಿ 3 ವಿಭಾಗಗಳಾಗಿ ವೈದ್ಯಕೀಯ ತಂಡ ಕಾರ್ಯ ಪ್ರವೃತ್ತವಾಗಿದೆ ಎಂದು ಅವರು ತಿಳಿಸಿದರು.
ತುಂಗಣಿ ಗ್ರಾ.ಪಂ. ಅಧ್ಯಕ್ಷ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಹಾಲು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ.ಕೆ.ಸ್ವಾಮಿ, ಜಿ.ಪಂ.ಸದಸ್ಯ ಡಿ.ವೆಂಕಟೇಶಯ್ಯ, ತಾ.ಪಂ. ಮಾಜಿ ಅಧ್ಯಕ್ಷೆ ಸುಕನ್ಯಾ ರಂಗಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ರಾಮಮೂರ್ತಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿದ್ದಯ್ಯ, ಕಾರ್ಯದರ್ಶಿ ಬಿ.ಕೆ.ಶಿವನಂಜಯ್ಯ, ಕನಕಪುರ ಶಿಬಿರದ ಉಪ ವ್ಯವಸ್ಥಾಪಕ ಗಣೇಶ್ ಪ್ರಸಾದ್, ಪಶುವೈದ್ಯ ಡಾ.ರಾಮಚಂದ್ರಯ್ಯ, ಡಾ.ಸುನಿಲ್, ಡಾ.ಸೌಮ್ಯಶ್ರಿ, ಡಾ. ಮುರುಗನ್, ಪಶು ವೈದ್ಯ ಪರೀಕ್ಷಕ ಎಚ್.ಜಿ.ರವಿ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.