ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸ್ಥಿತಿಗೆ ಚೈತನ್ಯ ತರಲು ಕ್ರಮ: ಚಿದಂಬರಂ

Last Updated 6 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ದೇಶದಲ್ಲಿನ ಸದ್ಯದ ಆರ್ಥಿಕ ಪರಿಸ್ಥಿತಿಗೆ ಚೈತನ್ಯ ತರಲು, ಆಹಾರ ಧಾನ್ಯಗಳ ಧಾರಣೆ ತಗ್ಗಿಸಲು `ಯೋಜಿತ ರೀತಿಯ ಅಪಾಯ~ ಎದುರಿಸಲೂ ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಸೋಮವಾರ ಹೇಳಿದರು.

ನಾಲ್ಕು ವರ್ಷಗಳ ನಂತರ ಹಣಕಾಸು ಖಾತೆಯನ್ನು ಬಹಳ ಸಂದಿಗ್ಧದ ಕಾಲದಲ್ಲಿ ವಹಿಸಿಕೊಂಡಿರುವ ಪಿ.ಚಿದಂಬರಂ, ಬಡ್ಡಿದರ ಕಡಿತ, ಹೂಡಿಕೆದಾರರಲ್ಲಿ ಮತ್ತೆ ವಿಶ್ವಾಸ ಮೂಡುವಂತೆ ಮಾಡುವುದು, ಹಣದುಬ್ಬರದ ಮೇಲೆ ಹತೋಟಿ, ಬೆಲೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯ ಮಾತು ಆಡಿದ್ದಾರೆ.

ಹಣಕಾಸು ಖಾತೆ ವಹಿಸಿಕೊಂಡ ನಂತರ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಚಿದಂಬರಂ, ಮುಖ್ಯವಾಗಿ ಬಡವರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯ ದೊರಕುವಂತೆ ಮಾಡಲು ಗೋದಾಮುಗಳಲ್ಲಿರುವ ಎಲ್ಲ ದಾಸ್ತಾನು ಬಳಸುವುದು, ಕೊರತೆ ಇರುವ ಧಾನ್ಯಗಳನ್ನು ಆಮದು ಮಾಡಿಕೊಳ್ಳುವುದೂ ಸೇರಿದಂತೆ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಹಣದುಬ್ಬರ ಶೇ 7.5ರ ಪ್ರಮಾಣದಲ್ಲಿರಲು ಆಹಾರ ಧಾನ್ಯಗಳ ಧಾರಣೆಯಲ್ಲಿ ಭಾರಿ ಏರಿಕೆಯಾಗಿರುವುದೇ ಕಾರಣ ಎಂಬುದನ್ನು ಒಪ್ಪಿಕೊಂಡ ಸಚಿವರು, ಧಾನ್ಯಗಳು ಸುಲಭವಾಗಿ ಮತ್ತು ಕಡಿಮೆ ಬೆಲೆಗೆ ದೊರೆಯುವಂತೆ ಮಾಡುವ ಮೂಲಕ ಹಣದುಬ್ಬರ ತಗ್ಗಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ವಿತ್ತೀಯ ಮತ್ತು ಹಣಕಾಸು ನಿರ್ವಹಣೆ ನೀತಿಗಳೆಲ್ಲವೂ `ಹಣದುಬ್ಬರ ನಿಯಂತ್ರಣ~ ಎಂಬ ಒಂದೇ ವಿಷಯದತ್ತ ಬೊಟ್ಟು ಮಾಡುತ್ತಿವೆ. ಹಾಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಜತೆಗೂಡಿ ಹಣದುಬ್ಬರವನ್ನು ಮಧ್ಯಮ ಸ್ಥರದಲ್ಲಿರುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

`ಬಡ್ಡಿದರವೂ ಹೂಡಿಕೆದಾರರಿಗೆ, ಕೈಗಾರಿಕೆಗಳು, ಉತ್ಪನ್ನ ತಯಾರಕರು, ಗೃಹ ಸಾಲ, ದ್ವಿಚಕ್ರವಾಹನ ಖರೀದಿ, ಶಿಕ್ಷಣ ಸಾಲ ಸೇರಿದಂತೆ ಎಲ್ಲ ವರ್ಗದ ಸಾಲಗಾರರಿಗೂ ಬಹಳ ಹೊರೆ ಎನ್ನುವಷ್ಟು ಪ್ರಮಾಣದಲ್ಲಿದೆ~ ಎಂದ ಸಚಿವರು, ತಕ್ಷಣದಲ್ಲಿಯೇ ಗಣನೀಯ ಪ್ರಮಾಣದಲ್ಲಿ ಬಡ್ಡಿದರ ಕಡಿತವಾಗಲಿರುವ ಸುಳಿವು ನೀಡಿದರು.

ತೆರಿಗೆ ರಿಯಾಯಿತಿ ಕುರಿತು ಪರಾಮರ್ಶೆಗೂ ನಿರ್ದೇಶನ ನೀಡಿರುವ ಚಿದಂಬರಂ, ಅದನ್ನು ಪೂರ್ವಾನ್ವಯವಾಗಿ ಜಾರಿಗೆ ತರುವಂತೆ, ಆ ಮೂಲಕ ಬಾಕಿಯಾಗಿರುವ ತೆರಿಗೆ ವ್ಯಾಜ್ಯಗಳನ್ನು ಪರಿಹರಿಸುವಂತೆ ತೆರಿಗೆ ಇಲಾಖೆಗೆ ಸೂಚಿಸಿರವುದಾಗಿ ಹೇಳಿದರು.

ದೇಶದ ಆರ್ಥಿಕ ಪರಿಸ್ಥಿತಿ ಹಲವು ವಿಚಾರಗಳಲ್ಲಿ ಸವಾಲು ಎದುರಿಸುವಂತಾಗಿದ್ದುದು ನಿಜ. ಸಮರ್ಥವಾದ ಆರ್ಥಿಕ ನೀತಿ, ಉತ್ತಮ ಆಡಳಿತ ಹಾಗೂ ಎಲ್ಲ ನೀತಿಗಳ ಪರಿಣಾಮಕಾರಿ ಅನುಷ್ಠಾನ ಕ್ರಮವಿದ್ದರೆ ಈ ಎಲ್ಲ ಸಮಸ್ಯೆಗಳಿಂದಲೂ ಬೇಗ ಹೊರಬಹುದು, ಎಂಥ ಸವಾಲುಗಳನ್ನೂ ಎದುರಿಸಬಹುದು ಎಂಬುದೂ ಅಷ್ಟೇ ನಿಜ ಎಂದು ಪ್ರತಿಪಾದಿಸಿದರು.

ಇದಕ್ಕೂ ಮುನ್ನ ಬೆಳಿಗ್ಗೆ ಆರ್‌ಬಿಐ ಗವರ್ನರ್ ಡಿ.ಸುಬ್ಬರಾವ್ ಅವರು ಚಿದಂಬರಂ ಅವರನ್ನು ಭೇಟಿ ಮಾಡಿ ಹಣದುಬ್ಬರ, ಬಡ್ಡಿದರ ವಿಚಾರವಾಗಿ ಚರ್ಚಿಸಿದ್ದರು.

ಸಚಿವರ ಜತೆ ಹಣಕಾಸು ನೀತಿ ಬಗ್ಗೆ ನಿರ್ಧಿಷ್ಟವಾಗಿಯೇನೂ ಚರ್ಚಿಸಲಿಲ್ಲ. ಮತ್ತೊಮ್ಮೆ ಭೇಟಿಯಾಗಿ ವಿಸ್ತೃತ ಚರ್ಚೆ ನಡೆಸುವೆ ಎಂದಷ್ಟೇ ಸುಬ್ಬರಾವ್ ಅವರು ಸುದ್ದಿಗಾರರಿಗೆ ತಿಳಿಸಿದ್ದರು.

ಕಳೆದ ವಾರವಷ್ಟೇ ಮೊದಲ ತ್ರೈಮಾಸಿಕದ ಪರಾಮರ್ಶೆ ವರದಿ ಪ್ರಕಟಿಸಿದ್ದ ಆರ್‌ಬಿಐ, ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಸಗಟು ಧಾರಣೆ ಆಧರಿಸಿದ ಹಣದುಬ್ಬರವೂ ಜೂನ್‌ನಲ್ಲಿ ಶೇ 7.5ರಷ್ಟು ಇದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT