ಮಂಗಳೂರು: ತೈಲ ಮತ್ತು ನೈಸರ್ಗಿಕ ಅನಿಲ ನಿಗಮಕ್ಕೆ(ಒಎನ್ಜಿಸಿ) ಒಳಪಟ್ಟ ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಕಂಪೆನಿ (ಎಂಆರ್ಪಿಎಲ್) ಪ್ರಸಕ್ತ ಹಣಕಾಸು ವರ್ಷದಲ್ಲಿ ದಾಖಲೆಯ 1.44 ಕೋಟಿ ಟನ್ ಕಚ್ಚಾತೈಲ ಶುದ್ಧೀಕರಣ ಮಾಡಿದ್ದರೂ, ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಕಂಪೆನಿ ಒಟ್ಟಾರೆ ₨757 ಕೋಟಿ ನಷ್ಟ ಅನುಭವಿಸಿದೆ. ಹೀಗಾಗಿ ಷೇರುದಾರರಿಗೆ ಈವರೆಗೂ ಲಾಭಾಂಶ ಪ್ರಕಟಿಸಿಲ್ಲ ಎಂದು ಕಂಪೆನಿಯ ಅಧ್ಯಕ್ಷ ಸುಧೀರ್ ವಾಸುದೇವ ಹೇಳಿದರು.
ಸುರತ್ಕಲ್ ಸಮೀಪದ ‘ಎಂಆರ್ಪಿಎಲ್’ ಆಡಳಿತ ಕಚೇರಿಯಲ್ಲಿ ಸೋಮವಾರ ನಡೆದ ಕಂಪೆನಿಯ ವಾರ್ಷಿಕ ಸಾಮಾನ್ಯ ಸಭೆಯ ಬಳಿಕ ಪತ್ರಕರ್ತರಿಗೆ ಈ ವಿಷಯ ತಿಳಿಸಿದ ಅವರು, 2011–12ರಲ್ಲಿ ಕಂಪೆನಿ ತೆರಿಗೆ ಪಾವತಿಯ ನಂತರ ₨909 ಕೋಟಿ ಲಾಭ ಗಳಿಸಿತ್ತು. ಈ ವರ್ಷ ದಾಖಲೆಯ ₨68,834 ಕೋಟಿ ವ್ಯವಹಾರ ನಡೆಸಿದರೂ ಈ ನಷ್ಟ ಉಂಟಾಗಿದೆ ಎಂದರು.
ಕಚ್ಚಾ ಮತ್ತು ಉತ್ಪನ್ನ ತೈಲಗಳ ಬೆಲೆ ಕುಸಿಯುತ್ತಿದ್ದ ಸಂದರ್ಭದಲ್ಲಿ ತೈಲಾಗಾರವನ್ನು ಸ್ಥಗಿತಗೊಳಿಸಿದ್ದರಿಂದ ಎಲ್ಲಾ ರೀತಿಯ ನಷ್ಟ ಮತ್ತು ನಿರ್ವಹಣಾ ಗಳಿಕೆ ಕಡಿಮೆಯಾಯಿತು. ಜತೆಯಲ್ಲಿ ಮೂರನೇ ಹಂತದ ಘಟಕಗಳ ಬಂಡವಾಳ ಮೇಲಿನ ಬಡ್ಡಿ ಮತ್ತು ಸವಕಳಿಯಿಂದಾಗಿ ಕಂಪೆನಿ ಲಾಭದಿಂದ ನಷ್ಟದ ಹಾದಿ ತುಳಿಯುವಂತಾಯಿತು ಎಂದು ಅವರು ವಿವರಿಸಿದರು.
₨10,938 ಕೋಟಿ ವೆಚ್ಚದ ‘ಎಂಆರ್ಪಿಎಲ್’ನ 3ನೇ ಹಂತದ ವಿಸ್ತರಣಾ ಕಾಮಗಾರಿ ಶೇ 99ರಷ್ಟು ಪೂರ್ಣಗೊಂಡಿದೆ. ಸಿಡಿಯು ಮತ್ತು ವಿಡಿಯು ಘಟಕಗಳು ಇಲ್ಲಿ ಆರಂಭವಾಗಿರುವುದರಿಂದ ವಾರ್ಷಿಕ ಉತ್ಪಾದನೆಯಲ್ಲಿ ಇದೀಗ 1.5 ಕೋಟಿ ಟನ್ಗೆ ತಲುಪುವುದು ಸಾಧ್ಯವಾಗಿದೆ ಎಂದು ಅವರು ವಿವರಿಸಿದರು.
ಲಾಭ ಗಳಿಕೆ ವಿಶ್ವಾಸ
ಎಂಆರ್ಪಿಎಲ್ನ 3ನೇ ಹಂತದ ಅಭಿವೃದ್ಧಿ ಯೋಜನೆಯಲ್ಲಿ ಹಲವಾರು ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸ ಲಾಗಿದೆ. ಇದು ಕಡಿಮೆ ಬೆಲೆಯ ಹೈ ಸಲ್ಫರ್, ಹೈ ಆಸಿಡ್, ಹೆವಿ ಕಚ್ಚಾ ತೈಲಗಳ ಸಂಸ್ಕರಣೆ, ಕಡಿಮೆ ಬೆಲೆಯ ನಾಫ್ತಾ ಮತ್ತು ಕಪ್ಪುತೈಲ ಉತ್ತಮ ಗುಣಮಟ್ಟಕ್ಕೆ ಏರಿಸುವ ಮೂಲಕ ಮೌಲ್ಯವರ್ಧಿತ ಉತ್ಪನ್ನಗಳಾದ ಪೊಲಿ ಪ್ರೊಪಿಲಿನ್ ಮತ್ತು ಉನ್ನತ ಮಟ್ಟದ ಯೂರೊ 3/4 ಡೀಸೆಲ್ ಉತ್ಪಾದಿಸ ಲಾಗುವುದು. ಇದರಿಂದ ಮುಂದಿನ ದಿನ ಗಳಲ್ಲಿ ಆರ್ಥಿಕ ಹಿಂಜರಿತವಿದ್ದರೂ ಕಂಪೆ ನಿಯ ಲಾಭ ಪ್ರಮಾಣ ಹೆಚ್ಚುವ ವಿಶ್ವಾಸ ವಿದೆ ಎಂದು ಅಧ್ಯಕ್ಷರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.