ಪಾಂಡವಪುರ: ಅಂಗವಿಕಲರು ಆತ್ಮಸ್ಥೈರ್ಯ ಬೆಳೆಸಿಕೊಳ್ಳುವುದಲ್ಲದೆ, ಸ್ವಾವಲಂಬಿಗಳಾಗಿ ಬದಕಲು ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎ.ಎಲ್. ಕೆಂಪೂಗೌಡ ಕರೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸರ್ಕಾರದಿಂದ ಅಂಗವಿಕಲರಿಗೆ ದೊರಕಬೇಕಾದ ಉದ್ಯೋಗ ಮೀಸಲಾತಿ ಹಾಗೂ ಸೌಲಭ್ಯವನ್ನು ದೊರಕಿಸಿಕೊಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಶೇ 40ರಷ್ಟು ಅಂಗಾಂಗದಲ್ಲಿ ಊನವಾಗಿದ್ದರೆ ಮಾತ್ರ ಅಂಗವಿಕಲರೆಂದು ಗುರುತಿಸುವಿಕೆಯ ಕ್ರಮವೇ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಅಂಗವಿಕಲರಿಗೆ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯೆ ವಿ. ವಸಂತಪ್ರಕಾಶ್ ಅಂಗವಿಕಲರ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಚರ್ಚ್ ಧರ್ಮಗುರು ಫಾದರ್ ಡೇವಿಡ್ ಸಗಾಯ್ ರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ತಾ. ಪಂ. ಅಧ್ಯಕ್ಷ ಎಚ್.ಎಂ. ರಾಮಕೃಷ್ಣ, ಇಒ ಸಿದ್ದಲಿಂಗಮೂರ್ತಿ, ಡಿ. ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ. ಹುಚ್ಚೇಗೌಡ, ಸದಸ್ಯರಾದ ಎಚ್.ಪಿ. ಸತೀಶ್ ಕುಮಾರ್, ಬಿಇಒ ಚಂದ್ರಶೇಖರ್, ರೈತ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಟಿ. ಮಂಜುನಾಥ್, ಅಂಗವಿಕಲ ಕಲ್ಯಾಣಾಧಿಕಾರಿ ದೇವರಾಜು ಹಾಜರಿದ್ದರು.