ಜೈಪುರ (ಪಿಟಿಐ): ಆರ್ಯ ಸಮಾಜದ ತ್ವರಿತ ವಿವಾಹ ಪದ್ಧತಿಗೆ ರಾಜಸ್ತಾನ ಹೈಕೋರ್ಟ್ ಕಡಿವಾಣ ಹಾಕಿದೆ. ತರಾತುರಿಯಲ್ಲಿ ಮದುವೆ ಆಗಬಯಸುವ ಪ್ರೇಮಿಗಳಿಗೆ ಅನುಕೂಲವಾಗಿದ್ದ ಈ ವಿವಾಹ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಅದು ಈಗ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿಗಳಾದ ದಲೀಪ್ ಸಿಂಗ್ ಮತ್ತು ಸಜ್ಜನ್ ಸಿಂಗ್ ಕೊಥಾರಿ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು, ತಮ್ಮ ಮಕ್ಕಳು ವಿವಾಹ ಬಂಧನಕ್ಕೆ ಒಳಗಾಗುವ ಉದ್ದೇಶದ ಕುರಿತು ವರ ಮತ್ತು ವಧುವಿನ ಪೋಷಕರು ಪೊಲೀಸರಿಗೆ ಮಾಹಿತಿ ನೀಡದೆ ನಡೆಯುವ ಯಾವುದೇ ಪ್ರೇಮ ವಿವಾಹಗಳನ್ನು ನಿಷೇಧಿಸಿ ತೀರ್ಪು ನೀಡಿದೆ.
`ಆರ್ಯ ಸಮಾಜದ ಮೂಲಕ ನಡೆಯುವ ಯಾವುದೇ ಪ್ರೇಮ ವಿವಾಹವನ್ನು ಪ್ರೇಮಿಗಳ ಕುಟುಂಬಗಳ (ಯುವಕ-ಯುವತಿಯರ ಕಡೆಯವರು) ಪ್ರಮುಖ (ಗಣ್ಯ) ವ್ಯಕ್ತಿಗಳು ಒಪ್ಪಿಗೆ ಮತ್ತು ಶಿಫಾರಸು ನೀಡದ ಹೊರತು ಅಂಗೀಕಾರಕ್ಕೆ ಅರ್ಹವಲ್ಲ~ ಎಂದು ಪೀಠ ತಿಳಿಸಿದೆ.
`ಪೋಷಕರು ತಮ್ಮ ಮದುವೆಗೆ ವಿರೋಧ ವ್ಯಕ್ತಪಡಿಸಿದಾಗ ಯುವಕ ಮತ್ತು ಯುವತಿ ತಮ್ಮ ಕಡೆಯ ಮೂವರು ಪ್ರಮುಖರನ್ನು ವಿವಾಹಕ್ಕೆ ಸಾಕ್ಷಿಗಳಾಗಿ ಆರ್ಯ ಸಮಾಜದಲ್ಲಿ ಹಾಜರುಪಡಿಸುವುದು ಕಡ್ಡಾಯ~ ಎಂದೂ ಪೀಠ ಹೇಳಿದೆ.