ದಾವಣಗೆರೆ: ಆರ್ಯವೈಶ್ಯರು ಅಲ್ಪಸಂಖ್ಯಾತರಾಗಿದ್ದರೂ, ಬಹುಸಂಖ್ಯಾತ ಸಮಾಜದವರು ಮಾಡುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸಾಮಾಜಿಕ, ಆರ್ಥಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಹೇಳಿದರು.
ನಗರದ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಆರ್ಯವೈಶ್ಯ ಸಮಾಜ ಬಾಂಧವರಲ್ಲಿ ಸತ್ಯ, ಪ್ರಾಮಾಣಿಕತೆಯಿದೆ. ಅಂತರಂಗ ಬಹಿರಂಗ ಒಂದೇ ಆಗಿದೆ. ಮಾತೃಭಾಷೆ ತೆಲುಗು ಆಗಿದ್ದರೂ ರಾಜ್ಯದಲ್ಲಿ ಕನ್ನಡ-ತೆಲುಗು ಸಾಮರಸ್ಯವನ್ನು ಮೆರೆದಿದ್ದಾರೆ. ಈ ಎರಡೂ ಭಾಷೆಗಳ ನಡುವೆ ಸಂಬಂಧ ಸುಮಧುರವಾಗಿದೆ. ಈ ಸಮುದಾಯ ಇದಕ್ಕಿಂತಲೂ ಕೆಳಸ್ತರದಲ್ಲಿರುವ ಸಮುದಾಯದ ಜನರನ್ನು ಮೇಲೆತ್ತಬೇಕು. ಅವರ ಅಭಿವೃದ್ಧಿಗೂ ಕೊಡುಗೆ ನೀಡಬೇಕು ಎಂದರು.
ಈ ಸಮಾಜವು ರಾಜಕೀಯವಾಗಿ ಮುಂದೆ ಬರಬೇಕಿದೆ. ತಮ್ಮ ರಾಜಕೀಯ ಗುರು, ಈ ಸಮುದಾಯದ ಡಿ.ಎಚ್. ಶಂಕರಮೂರ್ತಿ ಅವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಕೋರಿದರು.
ಪ್ರತಿಭೆಗಳನ್ನು ಸಣ್ಣ ಸಮುದಾಯದ ಸಂಘಟನೆಗಳೇ ಗುರುತಿಸಬೇಕು. ನಿರಂತರವಾಗಿ ಇಂಥ ವಿವಿಧ ಸಮಾಜಪರ ಚಟುವಟಿಕೆಗಳನ್ನು ನಡೆಸುವ ಮೂಲಕ ಗುರುತಿಸಿಕೊಳ್ಳಬೇಕು. ಎಲ್ಲರೂ ಮಾತೃಭಾಷೆಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಆರ್ಯವೈಶ್ಯ ಸಮಾಜದ ಮುಖಂಡ ಕಾಸಲ್ ಎಸ್. ವಿಠ್ಠಲ್ ಕಾರ್ಯಕ್ರಮ ಉದ್ಘಾಟಿಸಿದರು. ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಆರ್.ಪಿ. ರವಿಶಂಕರ್, ಸಿ.ಆರ್. ವಿರೂಪಾಕ್ಷಪ್ಪ, ಆರ್.ಜಿ. ನಾಗೇಂದ್ರಪ್ರಸಾದ್, ಎ.ಬಿ. ವಿಶ್ವನಾಥ, ಸುಗಂಧರಾಜ್, ಮುರಳಿ, ಕಾಸಲ್ ಹನುಮಂತ ಶ್ರೇಷ್ಠಿ, ಕೆ.ಪಿ. ಕೃಷ್ಣಮೂರ್ತಿ, ಸದಾಶಿವ ಇತರರು ಇದ್ದರು. ವಿವಿಧ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ಆರ್ಯವೈಶ್ಯ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.