ಬೆಂಗಳೂರು: ‘ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಪ್ರತಿ ವರ್ಷ ಲೆಕ್ಕಪತ್ರ (ಆಡಿಟ್) ವರದಿ ಸಲ್ಲಿಸುವುದು ಕಡ್ಡಾಯ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಮೊಹಮ್ಮದ್ ಮೊಹಿಸಿನ್ ಅವರು ತಿಳಿಸಿದರು.
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಜಾರಿ ಸಂಬಂಧ ಇರುವ ಗೊಂದಲಗಳ ನಿವಾರಣೆಗಾಗಿ ಶುಕ್ರವಾರ ನಡೆದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಪ್ರಮುಖರ ಜತೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಲೆಕ್ಕಪತ್ರ ವರದಿಯನ್ನು 3 ವರ್ಷಕ್ಕೊಮ್ಮೆ ಸಲ್ಲಿಸುವುದಾಗಿ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಮುಖ್ಯಸ್ಥರು ಹೇಳುತ್ತಿದ್ದಾರೆ. ಲೆಕ್ಕಪತ್ರ ವರದಿಯ ಆಧಾರದಲ್ಲೇ ಆರ್ಟಿಇ ಶುಲ್ಕ ಹಣ ಮರುಪಾವತಿ ಮಾಡುವುದರಿಂದ ಪ್ರತಿವರ್ಷ ಲೆಕ್ಕಪತ್ರ ವರದಿ ಸಲ್ಲಿಸುವುದು ಕಡ್ಡಾಯ’ ಎಂದು ಸ್ಪಷ್ಟಪಡಿಸಿದರು.
‘ಶೇ 75ಕ್ಕಿಂತ ಹೆಚ್ಚಿನ ಪೋಷಕರು ನಕಲಿ ವರಮಾನ ಪ್ರಮಾಣ ಪತ್ರ ಸಲ್ಲಿಸಿ ಆರ್ಟಿಇ ಅಡಿ ಪ್ರವೇಶ ಪಡೆಯುತ್ತಾರೆ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮುಖ್ಯಸ್ಥರು ತಿಳಿಸಿದ್ದಾರೆ. ಇದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ಗಳಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಸರಿಯಾಗಿ ಮೇಲ್ವಿಚಾರಣೆ ನಡೆಸುವಂತೆ ಎಲ್ಲ ಉಪ ನಿರ್ದೇಶಕರಿಗೂ ಸುತ್ತೋಲೆ ಕಳಿಸಲಾಗಿದೆ’ ಎಂದರು.
‘2013–14ನೇ ಸಾಲಿನ ಆರ್ಟಿಇ ಶುಲ್ಕ ಹಣ ಮರುಪಾವತಿಗೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ₨ 45 ಕೋಟಿ ಈಗಾಗಲೇ ಬಿಡುಗಡೆಯಾಗಿದೆ. ಇದೇ 20ರೊಳಗೆ ಶಾಲೆಗಳಿಗೆ ಈ ಹಣ ತಲುಪಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.
‘21 ಜಿಲ್ಲೆಗಳ ಆರ್ಟಿಇ ಕಾರ್ಯಪಡೆಗಳಿಂದ ವರದಿ ಬಂದಿದೆ. ವರದಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಭರವಸೆ ನೀಡಿದರು.
ಸಂಪುಟದ ಇತರ ತೀರ್ಮಾನಗಳು
* ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ತಜ್ಞ ವೈದ್ಯ ಡಾ.ಟಿ.ವೆಂಕಟೇಶ್, ಸಂಡೂರು ತಾಲ್ಲೂಕು ಚೋರನೂರಿನ ವೈದ್ಯಾಧಿಕಾರಿ ಡಾ.ಕೆ.ರಾಜಶೇಖರನ್ ಸೇವೆಯಿಂದ ವಜಾ
* ಕೃಷ್ಣಾಭಾಗ್ಯ ಜಲನಿಗಮ ಬಾಂಡ್ಗಳ ಮೂಲಕ ₨750 ಕೋಟಿ ಸಾಲ ಪಡೆಯುವುದಕ್ಕೆ ಸರ್ಕಾರದ ಘಟನೋತ್ತರ ಅನುಮೋದನೆ
* ನಿವೃತ್ತ ಐಎಫ್ಎಸ್ ಅಧಿಕಾರಿ ಆರ್.ಎಂ.ಎನ್.ಸಹಾಯ್ ಅವರನ್ನು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಒಪ್ಪಿಗೆ
* ಅಬಕಾರಿ ಮತ್ತು ಇತರೆ ಶುಲ್ಕಗಳನ್ನು ಆನ್ಲೈನ್ ಮೂಲಕ ಪಾವತಿಸಲು ಕರ್ನಾಟಕ ಅಬಕಾರಿ (ತಿದ್ದುಪಡಿ) ಕಾಯ್ದೆಗೆ ತಿದ್ದುಪಡಿ
* ಹಾಸನದ ಕೃಷಿ ಕಾಲೇಜು ಕಟ್ಟಡ ಕಾಮಗಾರಿಗೆ ಹೆಚ್ಚುವರಿಯಾಗಿ ₨ 6.74 ಕೋಟಿ
* ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯಾಗಿ ನಿವೃತ್ತ ಅಧೀನ ಕಾರ್ಯದರ್ಶಿ ಅರ್ಥರ್ ಹ್ಯಾರಿ ಗೊನ್ಸಾಲ್ವಿಸ್ ನೇಮಕ
* ಗೋಕಾಕ್ನ ಡೋಹರ ಕಕ್ಕಯ್ಯ ಜ್ಞಾನಪೀಠದ ಆಟದ ಮೈದಾನಕ್ಕಾಗಿ 1367.90 ಚ.ಮೀ ಜಾಗ.
* ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗೆ ಉಜಿರೆಯಲ್ಲಿ 17.54 ಎಕರೆ ಜಮೀನು
* ಹಾವೇರಿ ತಾಲ್ಲೂಕು ಗಂಜಿಗಟ್ಟಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಕುರುಬರ ಸಂಘಕ್ಕೆ ಅರ್ಧ ಎಕರೆ ಜಮೀನು ಮಂಜೂರು
* ಮಂಗಳೂರು ವಿಶೇಷ ಆರ್ಥಿಕ ವಲಯ ಯೋಜನೆಯಿಂದ ನಿರಾಶ್ರಿತರಾದ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವಾಗ ಮುದ್ರಾಂಕ ಶುಲ್ಕದಲ್ಲಿ ಶೇ 50ರಷ್ಟು ವಿನಾಯಿತಿ.
* ಕುಂದಾಪುರ ತಾಲ್ಲೂಕಿನ ಬೈಂದೂರು ಬಳಿ ಕೊಡೇರಿಯಲ್ಲಿ ಮೀನುಗಾರಿಕೆ ಇಳಿದಾಣ ಕೇಂದ್ರದ ಅಳಿವೆಯಲ್ಲಿರುವ ಎರಡು ತಡೆಗೋಡೆಗಳನ್ನು 200 ಮೀಟರ್ನಿಂದ 400 ಮೀಟರ್ಗೆ ವಿಸ್ತರಿಸುವ ₨33 ಕೋಟಿ ವೆಚ್ಚದ ಪ್ರಸ್ತಾವಕ್ಕೆ ಆಡಳಿತಾತ್ಮಕ ಒಪ್ಪಿಗೆ
* ಶ್ರೀರಂಗಪಟ್ಟಣದ ನಾಗತಿಹಳ್ಳಿ ಬಳಿ ₨8.10 ಕೋಟಿ ವೆಚ್ಚದಲ್ಲಿ ರೈಲ್ವೆ ಕೆಳಸೇತುವೆ ನಿರ್ಮಿಸಲು ಅನುಮತಿ
* ಕೊಪ್ಪಳ ಬಳಿ ₨ 35 ಕೋಟಿ ವೆಚ್ಚದಲ್ಲಿ ಕೆಳಸೇತುವೆ ನಿರ್ಮಾಣ
* ತುಮಕೂರು – ದಾವಣಗೆರೆ ಹಾಗೂ ತುಮಕೂರು – ರಾಯದುರ್ಗ ರೈಲು ಮಾರ್ಗದಲ್ಲಿ ₨ 13.88 ಕೋಟಿ ವೆಚ್ಚದಲ್ಲಿ ಮೇಲುಸೇತುವೆ ನಿರ್ಮಿಸಲು ಒಪ್ಪಿಗೆ
* ಸೋಲ್ಲಾಪುರ – ವಾಡಿ ಮಾರ್ಗದಲ್ಲಿ ಮೇಲುಸೇತುವೆ ನಿರ್ಮಾಣಕ್ಕೆ ಸಮ್ಮತಿ
* ಯಾದಗಿರಿಯಲ್ಲಿ ಆರಂಭವಾಗಲಿರುವ ರೈಲ್ವೆ ಬೋಗಿ ತಯಾರಿಕೆ ಕಾರ್ಖಾನೆಗೆ 150 ಎಕರೆ ನೀಡಲು ಒಪ್ಪಿಗೆ.
* ಪ್ರತಿ ಟನ್ಗೆ ₨ 1310 ದರದಲ್ಲಿ ಒಬ್ಬ ರೈತನಿಂದ ಗರಿಷ್ಠ 75 ಕ್ವಿಂಟಲ್ ಮೆಕ್ಕೆ ಜೋಳ ಖರೀದಿಸಲು ಒಪ್ಪಿಗೆ
* ಉಪ ಖನಿಜಗಳ ಗಣಿಗಾರಿಕೆಯನ್ನು ಹರಾಜು ಹಾಕುವ ಬದಲು ಐದು ವರ್ಷಗಳ ಕಾಲ ಗುತ್ತಿಗೆಗೆ ನೀಡಲು ಸಮ್ಮತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.