ದಾವಣಗೆರೆ: ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಅಡಿ ಜಿಲ್ಲೆಯ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ 2013-14ನೇ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಯಲ್ಲಿ ಶೇ 25 ಸೀಟುಗಳನ್ನು ದುರ್ಬಲ ವರ್ಗಕ್ಕೆ ಸೇರಿದ ಮಕ್ಕಳಿಗೆ ಕಾಯ್ದಿರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ಸಂಬಂಧ ಎಲ್ಲ ಬಿಇಒ, ನೋಡಲ್ ಅಧಿಕಾರಿಗಳ ಸಭೆ ನಡೆಸಿ, ಯಶಸ್ವಿ ಅನುಷ್ಠಾನಕ್ಕೆ ಪೂರ್ವಸಿದ್ಧತಾ ಕ್ರಮಗಳ ಬಗ್ಗೆ ಪರಿಶೀಲಿಸಲಾಗಿದೆ. ಇಲಾಖೆಯ ಸುತ್ತೋಲೆಯ ಪ್ರಕಾರ, ನೆರೆಹೊರೆಯ ಶಾಲೆಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಗುರುತಿಸಲಾಗಿದೆ. ಈ ಬಗ್ಗೆ ಮಾಹಿತಿ, ಶಾಲಾವಾರು ಲಭ್ಯವಿರುವ ಸೀಟುಗಳ ವಿವರ ಹಾಗೂ ಕಾಯ್ದಿರಿಸಿದ ಸೀಟುಗಳ ಮಾಹಿತಿಯನ್ನು ಆಯಾ ತಾಲ್ಲೂಕು ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಜ. 5ರಂದು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.
ಆರ್ಟಿಇ ಅಡಿ ದಾಖಲಾತಿ ಹೊಂದಲು ಇಚ್ಛಿಸುವವರಿಗೆ ನಿಗದಿತ ಅರ್ಜಿ ನಮೂನೆಗಳನ್ನು ಜ. 7ರಿಂದ ಫೆ. 5ರವರೆಗೆ ಆಯಾ ಶಾಲೆಗಳಲ್ಲಿ ವಿತರಿಸಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಅವಶ್ಯ ದಾಖಲೆಗಳೊಂದಿಗೆ ಆಯಾ ಶಾಲೆಯ ಮುಖ್ಯಸ್ಥರಿಗೆ ಫೆ. 5ರ ಒಳಗೆ ಸಲ್ಲಿಸಬೇಕು. ಡಿಡಿಪಿಐ ಕಚೇರಿಯಲ್ಲಿ, ಸಹಾಯವಾಣಿ ಸ್ಥಾಪಿಸಿದ್ದು, ಟೋಲ್ ಫ್ರೀ ದೂರವಾಣಿ: 1800 -425-111018ಗೆ ಸಾರ್ವಜನಿಕರು ಸಂಪರ್ಕಿಸಬಹುದು.
ಸಾರ್ವಜನಿಕರು ಅಗತ್ಯ ಮಾಹಿತಿಯನ್ನು ಸಹಾಯವಾಣಿ ಸಂಪರ್ಕಿಸಿ ಪಡೆಯಬಹುದು. ಇಲಾಖೆಯ ವೆಬ್ಸೈಟ್- www.schooleducation.kar.nic.in ವೀಕ್ಷಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.