ಬಾಗಲಕೋಟೆ: ಬೆಳಗಾವಿ ಪ್ರಾದೇಶಿಕ ವಿಭಾಗದ ಸಾರಿಗೆ ಅಧಿಕಾರಿಗಳು ನಗರದಲ್ಲಿ ಎರಡು ದಿನಗಳ ಕಾಲ ವಾಹನಗಳನ್ನು ತಪಾಸಣೆ ನಡೆಸಿ ತೆರಿಗೆ ಕಟ್ಟದ ಮತ್ತು ಪರವಾನಗಿ ಇಲ್ಲದೇ ಚಲಾಯಿಸುತ್ತಿದ್ದ ವಾಹನಗಳನ್ನು ತಡೆದು ರೂ. 40 ಲಕ್ಷ ದಂಡ ವಸೂಲಿ ಮಾಡಿದ್ದಾರೆ.
ಬೆಳಗಾವಿಯ ಪ್ರಾದೇಶಿಕ ಸಾರಿಗೆ ಇಲಾಖೆಯ ಉಪ ಆಯುಕ್ತ ನರೇಂದ್ರ ಹೊಳ್ಕರ್ ನೇತೃತ್ವದ 15 ಮಂದಿ ವಿಶೇಷ ಅಧಿಕಾರಿಗಳ ತಂಡ ಬಾಗಲಕೋಟೆ ನಗರ ಸೇರಿದಂತೆ ವಿವಿಧೆಡೆ ಬುಧವಾರ ಒಂದೇ ದಿನ ರೂ.40 ಲಕ್ಷ ದಂಡ ವಿಧಿಸಿ ಅಗತ್ಯ ದಾಖಲೆ ಇಲ್ಲದ 600 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಟಂಟಂ, ಗೂಡ್ಸ್, ಲಾರಿ ಸೇರಿದಂತೆ ಮತ್ತಿತರರ ವಾಹನಗಳು ನಿಯಮಗಳನ್ನು ಗಾಳಿಗೆ ತೂರಿ ಸಂಚರಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನಿ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ಬಿಗುಕ್ರಮಕೈಗೊಂಡಿದ್ದಾರೆ.
ಮರಳು ಸಾಗಿಸುವ ಟ್ರ್ಯಾಕ್ಟರ್ ಮೇಲೆ ನಿಗಾ: ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಸಾಗಿಸುವ ಟ್ರ್ಯಾಕ್ಟರ್, ಟಿಪ್ಪರ್ಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಗುರುಬಾಳಪ್ಪ ಜಿ.ಪಾಟೀಲ ತಿಳಿಸಿದರು.
ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ನಮ್ಮ ತನಿಖಾ ತಂಡಗಳು ಕಾರ್ಯಾಚರಣೆ ನಡೆಸಿವೆ. ಚೆಕ್ ಪೋಸ್ಟ್, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಜಿಲ್ಲೆಯಾದ್ಯಂತ ವಾಹನಗಳ ತಪಾಸಣೆ ನಡೆಸಿ, ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ನಗರದಲ್ಲಿ ಎರಡು ದಿನಗಳಿಂದ ಟಂಟಂ ಸಂಚಾರ ಬಹುತೇಕ ಸ್ತಬ್ಧವಾಗಿದೆ. ಸುಮಾರು 700ಕ್ಕೂ ಹೆಚ್ಚು ಟಂಟಂಗಳು ನಗರದಲ್ಲಿ ಪ್ರತಿದಿನ ಸಂಚಾರ ಮಾಡುತ್ತಿದ್ದವು. ಬಾಗಲಕೋಟೆ ಸುತ್ತಲಿನ ಗ್ರಾಮಗಳಿಂದ ಪ್ರಯಾಣಿಕರನ್ನು ಹಾಗೂ ಇತರೆ ವ್ಯಾಪಾರಸ್ಥರ ಸಾಮಾಗ್ರಿಗಳನ್ನು ತುಂಬಿಕೊಂಡು ಹೋಗುವ ಗೂಡ್ಸ್ ಟಂಟಂಗಳು ಸಂಚಾರವನ್ನು ಸ್ಥಗಿತಗೊಳಿಸಿವೆ.