ಆಲಂಕಾರು (ಉಪ್ಪಿನಂಗಡಿ): ಎಂಡೊ ಪೀಡಿತರ ಸಂತ್ರಸ್ತರ ಸಮೀಕ್ಷೆ ಕಾರ್ಯಕ್ರಮಕ್ಕೆ ಗುರುವಾರ ಆಲಂಕಾರುನಲ್ಲಿ ಚಾಲನೆ ನೀಡಲಾಯಿತು.
ಪುತ್ತೂರು ಎಂಡೊ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮಹಮ್ಮದ್ ಸಮೀಕ್ಷೆಯ ಅರ್ಜಿ ನಮೂನೆ ಹಸ್ತಾಂತರಿಸಿ ಸಮೀಕ್ಷೆಯನ್ನು ಉದ್ಘಾಟಿಸಿದರು.
ಗ್ರಾಮದಲ್ಲಿ ಇಬ್ಬರನ್ನು ಒಳಗೊಂಡ 4 ತಂಡಗಳು ಸಮೀಕ್ಷೆ ಕಾರ್ಯ ನಡೆಸಲಿದ್ದು, ಆರೋಗ್ಯ ಸಹಾಯಕಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ.
15 ಕಾಲಂಗಳಿರುವ ಅರ್ಜಿ ನಮೂನೆಯಲ್ಲಿ ಎಂಡೊ ಪೀಡಿತರ ಹೆಸರು, ವಿಳಾಸ ಮುಂತಾದ ಮಾಹಿತಿಯೊಂದಿಗೆ ಹುಟ್ಟಿನಿಂದಲೇ ಬಂದ ಅಂಗವೈಕಲ್ಯ, ಹೃದಯ, ಶ್ವಾಸಕೋಶ, ಮಾನಸಿಕ ತೊಂದರೆ, ಅಪಸ್ಮಾರ, ಪಾರ್ಶ್ವವಾಯು, ದೃಷ್ಟಿಹೀನತೆ, ಕಿವುಡು, ಕ್ಯಾನ್ಸರ್, ಬಂಜೆತನ ಮೊದಲಾದ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು.
ಆಲಂಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವ ಗೌಡ, ಪೆರಾಬೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಂಗಾರತ್ನ ವಸಂತ್, ಆಲಂಕಾರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಶೆಟ್ಟಿ, ಕಾರ್ಯದರ್ಶಿ ಆನಂದ, ಎಂಡೋ ವಿರೋಧಿ ಹೋರಾಟ ಸಮಿತಿ ಕಾರ್ಯದರ್ಶಿ ಜಯಕರ ಕಲ್ಲೇರಿ, ಶ್ರಿಧರ ಪೂಜಾರಿ, ರಾಮಮೋಹನ ರೈ, ಪದ್ಮನಾಭ ಗೌಡ ಇದ್ದರು.