ಆಲಮಟ್ಟಿ: ಗಣೇಶ ಚತುರ್ಥಿರೈತರ ಪಾಲಿಗೆ ಮಾತ್ರ ಸಿಹಿಯಾಗಿ ಪರಿಣ ಮಿಸಿದೆ. ಕಳೆದ ಒಂದು ತಿಂಗಳಿಂದ ಮಳೆ ಯಿಲ್ಲದೇ ಕಂಗಾಲಾದ ರೈತರಿಗೆ ರಾತ್ರಿ ಯಿಂದ ಪ್ರತಿನಿತ್ಯವೂ ಸುರಿಯುತ್ತಿರುವ ಮಳೆ ಹರ್ಷ ಮೂಡಿಸಿದೆ.
ಆಲಮಟ್ಟಿ, ವಂದಾಲ, ಬೇನಾಳ, ಅರಳದಿನ್ನಿ, ಚಿಮ್ಮಲಗಿ ಸೇರಿದಂತೆ ನಾನಾ ಕಡೆ ಜಿಟಿಜಿಟಿಯಾಗಿ ಐದಾರು ಗಂಟೆಗಳ ಕಾಲ ನಿರಂತರ ಮಳೆ ಸುರಿದಿದೆ.
ಈ ಭಾಗದಲ್ಲಿ ತಡವಾಗಿ ಬಿತ್ತನೆ ಮಾಡಿದ ಸೂರ್ಯಕಾಂತಿ, ತೊಗರಿ, ಸಜ್ಜೆ, ಶೇಂಗಾ, ಉಳ್ಳಾಗಡ್ಡಿ ಬೆಳೆಗೆ ಈ ಮಳೆ ಅನುಕೂಲವಾಗಿದ್ದು, ವಿದ್ಯುತ್ ಅನಾನೂಕೂಲತೆಯಿಂದ ನಿಂತಿದ್ದ ನೀರು ಹರಿಸುವ ಪ್ರಕ್ರಿಯೆ ಇದರಿಂದ ಸುಗಮವಾಗಿದೆ.
ಲಭ್ಯವಾದ ಮಾಹಿತಿಯ ಪ್ರಕಾರ ಆಲಮಟ್ಟಿಯಲ್ಲಿ ಸೋಮವಾರ 36 ಮಿ.ಮೀ, ಮಂಗಳವಾರ 45 ಮಿ.ಮೀ ಮಳೆಯಾಗಿದೆ. ಮಟ್ಟಿಹಾಳದಲ್ಲಿ ಮಂಗಳವಾರ 16.4 ಮಿ.ಮೀ ಮಳೆಯಾಗಿದೆ.
ತಾಳಿಕೋಟಿ ವರದಿ
ತಾಳಿಕೋಟೆ: ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಒಮ್ಮೆ ಜಿಟಿ–ಜಿಟಿ, ಒಮ್ಮೆ ಜೋರಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿರುವ ಅನೇಕ ಜಂತಿಮನೆಗಳು ತಂಪು ಹಿಡಿದು ಸೋರತೊಡಗಿವೆ.
ಸೋಮವಾರ ಇಡೀ ರಾತ್ರಿ ಸುರಿದ ಮಳೆ ಹಗಲು ವಿಶ್ರಾಂತಿ ಪಡೆದಿತ್ತು. ಆದರೆ ರಾತ್ರಿ ಮತ್ತೆ ಮಳೆಯಾಟ ಪ್ರಾರಂಭವಾಗಿದ್ದು, ಮಣ್ಣಿನ ಮಾಳಿಗೆಯ ಜನತೆ ಆತಂಕದಲ್ಲಿ ರಾತ್ರಿಗಳನ್ನು ಕಳೆಯುವಂತಾಗಿದೆ.
ಇದು ಪ್ಲಾಸ್ಟಿಕ್ ಹಾಳೆಗಳನ್ನು ಮಾರುವ ಪಟ್ಟಣದ ಎಲ್ಲ ಅಂಗಡಿ ಗಳಲ್ಲಿ ಭರ್ಜರಿ ವ್ಯಾಪಾರಕ್ಕೂ ಕಾರಣವಾಯಿತು.
ಪಟ್ಟಣಿಗರು, ಹಳ್ಳಿಗರು ಸೇರಿದಂತೆ ಎಲ್ಲೆಡೆ ಪ್ಲಾಸ್ಟಿಕ್ ಹಾಳೆ ಖರೀದಿಗೆ ಮುಗಿ ಬಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಹೊಸ ಬಡಾವಣೆಗಳಲ್ಲಿ ವಾಸ ಮಾಡುವವರ ಸ್ಥಿತಿ ತುಂಬಾ ಶೋಚ ನೀಯವಾಗಿದೆ ಅಲ್ಲಿ ಸರಿಯಾದ ರಸ್ತೆಗಳು ನಿಮಾರ್ಣವಾಗಿಲ್ಲದಿರು ವುದರಿಂದ ಕಪ್ಪು ಎರೆ ಮಣ್ಣಿನಿಂದ ಆವೃತ್ತವಾಗಿರುವ ಈ ಭಾಗದಲ್ಲಿ ಅಲ್ಲಿನ ನಿವಾಸಿಗಳು ಹೊರಗೆ ತಿರುಗುವುದೇ ದುಸ್ತರವಾಗಿದೆ.
ಪಟ್ಟಣದಲ್ಲಿ ಒಳಚರಂಡಿ ಯೋಜನೆ ಜಾರಿಯಾಗಿದ್ದು ಅದು ಪೂರ್ಣಗೊಳ್ಳಲು ಕನಿಷ್ಟ ಎರಡು ವರ್ಷ ಬೇಕಂತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.