ಕೆ ಆರ್ ವೃತ್ತದ ಎಸ್ಜೆಪಿಯ ಹೋಟೆಲ್ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ನಲ್ಲಿ ಅಂದು ಬಗೆಬಗೆಯ ಅಡುಗೆ ತಯಾರಾಗುತ್ತಿತ್ತು. ಆದರೆ ಹಾಗೆಂದು ಭಾರೀ ಸಮಾರಂಭವೇನೂ ಇರಲಿಲ್ಲ. ಅಷ್ಟಕ್ಕೂ ಒಲೆಯ ಮುಂದಿದ್ದವರೆಲ್ಲರೂ ವಿದ್ಯಾರ್ಥಿಗಳು. ಅಡುಗೆ ವಿಧಾನವೂ ಹೊಸತು, ಅಡುಗೆ ಮಾಡುವುದು ಅವರಿಗೂ ಹೊಸತು.
ಸ್ಪರ್ಧಾಳುಗಳ ಮುಖದಲ್ಲಿ ಆತಂಕ, ಅವಸರ. ನಿಗದಿತ ಸಮಯದಲ್ಲಿ ಖಾದ್ಯ ತಯಾರಿಸಿ ಪ್ರಖ್ಯಾತ ಶೆಫ್ಗಳನ್ನು (ಅಡುಗೆ ತಜ್ಞ) ಮೆಚ್ಚಿಸಬೇಕಾದ ಜವಾಬ್ದಾರಿ ಎದ್ದು ಕಾಣುತ್ತಿತ್ತು.
ಐರೋಪ್ಯ ಒಕ್ಕೂಟ ಮತ್ತು ಇಟಲಿ ಸರ್ಕಾರದ ಸಹಯೋಗದಲ್ಲಿ ಈ ಸ್ಪರ್ಧೆ ಆಯೋಜಿಸಿದ್ದು `ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆ ಗುಣಮಟ್ಟ ಖಾತರಿ ಒಕ್ಕೂಟ~. ಅಪೀಜೆ ಇನ್ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ, ಮುಂಬೈನ ಸೆಂಟರ್ ಫಾರ್ ಲರ್ನಿಂಗ್ ಅಂಡ್ ಡೆವಲಪ್ಮೆಂಟ್ ಮತ್ತು ದೆಹಲಿ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ಗಳೂ ಕೈ ಜೋಡಿಸಿದ್ದವು. ಭಾರತೀಯರಲ್ಲಿ ಅಡುಗೆ ಮಾಡುವಾಗ `ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್~ ಬಳಸಲು ಉತ್ತೇಜನ ನೀಡುವುದು ಅದರ ಉದ್ದೇಶ.
ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾರತೀಯ ಅಡುಗೆಗೆ ಮಹತ್ವ ನೀಡಿ ಆಲಿವ್ ಎಣ್ಣೆ ಬಳಸಿ ಹೊಸ ಖಾದ್ಯಗಳನ್ನು ತಯಾರಿಸಿದರು. ಇದಕ್ಕಾಗಿ ನಿಗದಿತ ಸಮಯದಲ್ಲಿ ತರಕಾರಿ ಕತ್ತರಿಸುವ, ಮಿಕ್ಸಿಯಲ್ಲಿ ಮಸಾಲೆಗಳನ್ನು ರುಬ್ಬುವ ಧಾವಂತದಲ್ಲಿದ್ದರು.
ವಿಜೇತರು: ಸ್ಪರ್ಧೆಯಲ್ಲಿ ದೆಹಲಿಯ ದಿವಾಕರ್ ಬಲೋಡಿ ತಯಾರಿಸಿದ `ಸೀಗಡಿ ಬಿರಿಯಾನಿ~ ತೀರ್ಪುಗಾರರಿಂದ ಮೊದಲ ಬಹುಮಾನಕ್ಕೆ ಪಾತ್ರವಾಯಿತು. ಇವರಿಗೆ ಇಟಲಿ ಪ್ರವಾಸದ ಅವಕಾಶ ದೊರೆಯಿತು.
ಅಪೀಜೆ ಇನ್ಸ್ಟಿಟ್ಯೂಟ್ನ ವೇದಾಸ್ ದೇಶಮುಖ್, ಜೀತ್ಪಾಲ್ ಬಿಶ್ಟ್ ಅವರು ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು.