ಮಡಿಕೇರಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಯೋಜಿಸಿರುವ `ಆಳ್ವಾಸ್ ನುಡಿಸಿರಿ~ ಉತ್ಸವ ನವೆಂಬರ್ 11,12 ಮತ್ತು 13 ರಂದು ಮೂಡಬಿದಿರೆಯ ವಿದ್ಯಾಗಿರಿ ಯಲ್ಲಿರುವ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಸಂಸ್ಥೆಯ ಮಾಧ್ಯಮ ವಿಭಾಗದ ಉಪನ್ಯಾಸಕರಾದ ಹರೀಶ್ ಕೆ. ಆಗೂರು ತಿಳಿಸಿದರು.
ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಪೂರ್ವ ಸಿದ್ಧತೆಗಳ ಬಗ್ಗೆ ಚರ್ಚಿಸಲು ಅ.23 ರಂದು ಬೆಳಿಗ್ಗೆ 10 ಗಂಟೆಗೆ ಮಂಡ್ಯದ ಶ್ರೀ ನಂಜುಡೇಶ್ವರ ಸಮುದಾಯ ಭವನದಲ್ಲಿ ಹಾಗೂ ಮಧ್ಯಾಹ್ನ 3ಗಂಟೆಗೆ ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ ಭವನದಲ್ಲಿ ಸಮಾಲೋಚನಾ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಈ ಬಾರಿ ಸಮ್ಮೇಳನದಲ್ಲಿ `ಕನ್ನಡ ಮನಸ್ಸು; ಸಂಘರ್ಷ ಮತ್ತು ಸಾಮರಸ್ಯ~ ಎಂಬ ಪರಿಕಲ್ಪನೆಯೂ ವಿಶೇಷವಾಗಿದೆ ಎಂದರು.
ಸಮ್ಮೇಳನದ ಅಧ್ಯಕ್ಷರಾಗಿ ನಾಡೋಜ ಡಾ.ಎಂ.ಎಂ. ಕಲಬುರ್ಗಿ ವಹಿಸಲಿದ್ದಾರೆ ಹಾಗೂ ಡಾ. ಬರಗೂರು ರಾಮಚಂದ್ರಪ್ಪ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸಮ್ಮೇಳನದ ಸಮಾರಂಭದಲ್ಲಿ ಡಾ. ಚಂದ್ರಶೇಖರ ಕಂಬಾರ ಅವರಿಗೆ ಗೌರವಿಸಲಾಗುವುದು ಎಂದು ತಿಳಿಸಿದರು.
ಈ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳು ಸೇರಿದಂತೆ ಸುಮಾರು 25 ರಾಷ್ಟ್ರಗಳಿಂದ ಕನ್ನಡ ಆಸಕ್ತ ಪ್ರೇಮಿಗಳೂ ಆಗಮಿಸುವರು ಎಂದು ಅಂದಾಜು ಮಾಡಲಾಗಿದೆ ಹಾಗೂ ರಾಜ್ಯದಾದ್ಯಂತ ಜಿಲ್ಲಾವಾರು ಆಳ್ವಾಸ್ ನುಡಿಸಿರಿ ಘಟಕ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.