ಮಿಜಾರು ಶೋಭಾವನ (ಮೂಡುಬಿದಿರೆ): `ಮನಸ್ಸು ಶುದ್ಧವಾಗದೇ ಇದ್ದರೆ ಆಡಂಬರ ವ್ಯರ್ಥ. ಮನಸ್ಸು ಶುದ್ಧಗೊಳಿಸಲು ಕಲೆಯ ಪ್ರೀತಿ, ಸಂಗೀತದ ಒಲವು ಇದ್ದು ಅದನ್ನು ಆಸ್ವಾದಿಸಿ ಆನಂದಿಸಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಪ್ರತಿಪಾದಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮಿಜಾರು ಶೋಭಾವನದಲ್ಲಿ ಗುರುವಾರ ಆರಂಭಗೊಂಡ 20ನೇ ವರ್ಷದ ಆಳ್ವಾಸ್ ವಿರಾಸತ್ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಎಂ. ಮೋಹನ ಆಳ್ವ ಮಾತನಾಡಿ, ಮುಖ್ಯಮಂತ್ರಿ ಎಲ್ಲ ಕಡೆ ಕೋಟಿಗಟ್ಟಲೆ ಅನುದಾನ ಕೊಡುತ್ತಿದ್ದರೂ ನಮ್ಮ ಕಾರ್ಯಕ್ರಮಗಳಿಗೆ ಒಂದು ರೂಪಾಯಿ ಸಹ ಕೊಡದೆ ಇರುವುದು ಆಶ್ಚರ್ಯ ತರಿಸಿದೆ. ನಮ್ಮ ಕೂಗು ಸರ್ಕಾರಕ್ಕೆ ಮುಟ್ಟಿಲ್ಲ. ಒಂದಲ್ಲ ಒಂದು ದಿನ ನಮ್ಮ ಕೂಗು ಮುಟ್ಟಬಹುದು ಎಂಬ ನಿರೀಕ್ಷೆ ಇದೆ. ಮಿತ್ರರ ಸಹಾಯದಿಂದಲೇ ಕಾರ್ಯಕ್ರಮಗಳು ನಡೆಯಬೇಕು ಎಂಬುದು ದೇವರ ಇಚ್ಛೆ ಇರಬಹುದು ಎಂದರು.
ಈ ಸಂದರ್ಭದಲ್ಲಿ ಕೋಲ್ಕತ್ತದ ಪ್ರಸಿದ್ಧ ಹಿಂದೂಸ್ಥಾನಿ ಗಾಯಕ ಪಂಡಿತ್ ಅಜೋಯ್ ಚಕ್ರವರ್ತಿ ಅವರಿಗೆ `ಆಳ್ವಾಸ್ ವಿರಾಸತ್-2012~ ಪ್ರಶಸ್ತಿ ಪ್ರದಾನ ಮಾಡಲಾಯಿತು.