ಕಟೀಲು : ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ತಂಡದವರು ಕರ್ನಾಟಕ ರಾಜ್ಯ ಬಾಲ್ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಬಾಲ್ಬ್ಯಾಡ್ಮಿಂಟನ್ ಸಂಸ್ಥೆಯ ವತಿಯಿಂದ ಇಲ್ಲಿನ ದುರ್ಗಾಪರಮೇಶ್ವರಿ ಹೈಸ್ಕೂಲು ಆಶ್ರಯದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಸಬ್ಜೂನಿಯರ್ ಬಾಲ್ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಬಾಲಕ ಮತ್ತು ಬಾಲಕಿಯರ ವಿಭಾಗಗಳೆರಡರಲ್ಲಿಯೂ ಕ್ವಾರ್ಟರ್ಫೈನಲ್ ತಲುಪಿದ್ದಾರೆ.
ಶನಿವಾರ ನಡೆದ ಬಾಲಕರ ವಿಭಾಗದ ಲೀಗ್ ಹಂತದ ಪಂದ್ಯಗಳಲ್ಲಿ ಆಳ್ವಾಸ್ ತಂಡದ ಆಟಗಾರರು ಗಂಗೊಳ್ಳಿಯ ಸರ್ಕಾರಿ ಹೈಸ್ಕೂಲು ತಂಡವನ್ನು 29–7. 29–4ರಿಂದ ಸೋಲಿಸಿದರೆ, ಇನ್ನೊಂದು ಪಂದ್ಯದಲ್ಲಿ ಮೊಡಂಕಾಪುವಿನ ದೀಪಿಕಾ ತಂಡವನ್ನು 29–9, 29–5ರಿಂದ ಮಣಿಸಿದರು.
ಈ ವಿಭಾಗದಲ್ಲಿ ಆತಿಥೇಯ ಕಟೀಲಿನ ದುರ್ಗಾಪರಮೇಶ್ವರಿ ಪ್ರಾಥಮಿಕ ಶಾಲಾ ತಂಡ, ಮಂಡ್ಯದ ಕೌಡ್ಲೆ ಕ್ಲಬ್, ತುಮಕೂರಿನ ಎಸ್ಡಿಬಿಸಿ, ಪಾಂಡವಪುರ ಕ್ಲಬ್, ಆಗುಂಬೆಯ ವಿ.ಎಂ.ಶಾಲಾ ತಂಡ ಎಂಟರ ಘಟ್ಟ ಪ್ರವೇಶಿಸಿದವು.
ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ಜಯಾ ಸ್ಪೋರ್ಟ್ಸ ಕ್ಲಬ್ ತಂಡದವರು ಲೀಗ್ ಹಂತದ ಪಂದ್ಯಗಳಲ್ಲಿ ಬಜ್ಪೆಯ ಸೇಂಟ್ ಜೋಸೆಫ್ಸ್ ಸ್ಕೂಲ್, ಗಂಗೊಳ್ಳಿಯ ಸರ್ಕಾರಿ ಶಾಲಾ ತಂಡಗಳನ್ನು ಮಣಿಸಿದರು ಕ್ವಾರ್ಟರ್ ಫೈನಲ್ಗೆ ಮುನ್ನಡೆದರು.
ಇತರ ಪಂದ್ಯಗಳಲ್ಲಿ ಗೆಲುವು ಗಳಿಸಿದ ಕುಶಾಲನಗರದ ಮೊರಾರ್ಜಿ ಶಾಲೆ, ಮೈಸೂರಿನ ವಿ.ಎಂ.ಎಸ್.ಶಾಲೆ, ತುಮಕೂರಿನ ಹೊನ್ನುಡಿಕೆಯ ಸ್ವರ್ಣಾಂಭ ಸ್ಕೂಲ್, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ತಂಡ, ಹುಣಸೂರು ಬಾಲ್ಬ್ಯಾಡ್ಮಿಂಟನ್ ಕ್ಲಬ್ ತಂಡಗಳೂ ನಾಕೌಟ್ ಹಂತ ಪ್ರವೇಶಿಸಿದವು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾರತ ಬಾಲ್ಬ್ಯಾಡ್ಮಿಂಟನ್ ಫೆಡರೇಷನ್ನ ಪ್ರಧಾನ ಕಾರ್ಯದರ್ಶಿ ರಾಜಾರಾವ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.