‘ಆಶಾ’ ಸೇವೆಗೆ ತಕ್ಕ ಪ್ರತಿಫಲ ಸಿಗಲಿ (ಸಂಗತ ಫೆ.21) ರೂಪ ಹಾಸನ ಇವರ ಲೇಖನ ಆಶಾ ಮತ್ತು ಸಮುದಾಯದ ಆರೋಗ್ಯ ದೃಷ್ಟಿಯಿಂದ ಕಾಳಜಿಯಿಂದ ಕೂಡಿದ್ದು, ಸರ್ಕಾರಗಳ ದೃಷ್ಟಿಯಲ್ಲಿ ಜವಾಬ್ದಾರಿಯನ್ನು ಎಚ್ಚರಿಸುವಲ್ಲಿ ಸಹಕಾರಿಯಾಗಿದೆ.
ಗ್ರಾಮೀಣ ಜನತೆಯ ಆರೋಗ್ಯ, ಗ್ರಾಮ ನೈರ್ಮಲ್ಯಕ್ಕೆ ಆಶಾಕಿರಣರಾಗಿರುವ ಆಶಾ ಕಾರ್ಯಕರ್ತೆಯರು ಅತ್ಯಂತ ಕಾಳಜಿಯಿಂದ, ಅಂತಃಕರಣದಿಂದ ದುಡಿಯುತ್ತಿದ್ದಾರೆ. ಹಗಲು ರಾತ್ರಿ ಎನ್ನದೆ ಗಾಢ ಶ್ರದ್ಧೆ ಹಾಗೂ ಸಮರ್ಪಣಾ ಭಾವದಿಂದ, ಪ್ರೀತಿಯಿಂದ ರೋಗಿಗಳ ಅಗತ್ಯಗಳಿಗೆ ಸ್ಪಂದಿಸುವ ಈ ಹೆಣ್ಣು ಮಕ್ಕಳು ಹಲವಾರು ರೀತಿಯಲ್ಲಿ ಸಮಾಜಕ್ಕೆ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದಾರೆ. ಅತ್ಯಂತ ಕಷ್ಟಕರ ಜವಾಬ್ದಾರಿಯನ್ನು ಆಶಾ ಕಾರ್ಯಕರ್ತೆಯರು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸರ್ಕಾರ ಇವರ ಸೇವೆಯನ್ನು ಪಡೆಯುತ್ತಾ ಪ್ರೋತ್ಸಾಹಧನದ ಹೆಸರಿನಲ್ಲಿ ಪುಡಿಗಾಸನ್ನು ನೀಡಿ ಇವರನ್ನು ಅತ್ಯಂತ ಕಠೋರವಾಗಿ ದುಡಿಸಿಕೊಳ್ಳುತ್ತಿವೆ. ಹಲವೆಡೆ ಪ್ರೋತ್ಸಾಹಧನ ಪಡೆಯಲು ಇವರಿಗೆ ಹಲವಾರು ತಿಂಗಳುಗಳೇ ಬೇಕಾಗಿವೆ. ಇಂದಿನ ದುಬಾರಿ ದಿನಗಳಲ್ಲಿ ಈ ಅತ್ಯಲ್ಪ ವೇತನದಿಂದ ಜೀವನ ನಿರ್ವಹಣೆ ಅತ್ಯಂತ ದುಸ್ತರವಾಗಿದೆ.
ಆದ್ದರಿಂದ ಆಶಾ ಕಾರ್ಯಕರ್ತೆಯರು ತಮ್ಮ ಒಗ್ಗಟ್ಟನ್ನು ಕಾಪಾಡಿಕೊಳ್ಳುತ್ತಾ ಸುದೀರ್ಘ ಹೋರಾಟಕ್ಕೆ ಸಜ್ಜಾಗಬೇಕಾಗಿರುವುದು ಈ ಗಳಿಗೆಯ ಅವಶ್ಯಕತೆ.