ಹಾಸನ:`ಹಕ್ಕಿಪಿಕ್ಕಿ ಜನಾಂಗದ ಮಕ್ಕಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸಮೀಪದ ಅಂಗಡಿಹಳ್ಳಿಯಲ್ಲಿ ನಿರ್ಮಿಸಿರುವ ಆಶ್ರಮ ಶಾಲೆಯನ್ನು ಮುಚ್ಚಲು ಸಮಾಜ ಕಲ್ಯಾಣ ಇಲಾಖೆ ಮುಂದಾಗಿದ್ದು, ಇದರಿಂದ ಸಮಾಜದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ.
ಈ ಶಾಲೆಯನ್ನು ಉಳಿಸಿಕೊಡಬೇಕು~ ಎಂದು ಆಗ್ರಹಿಸಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಹಕ್ಕಿಪಿಕ್ಕಿ ಜನಾಂಗದ ಪ್ರತಿನಿಧಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಹದಿನಾರು ವರ್ಷಗಳಿಂದ ಇಲ್ಲಿ ಶಾಲೆ ನಡೆಯುತ್ತಿದೆ. ಸುಮಾರು 70 ವಿದ್ಯಾರ್ಥಿಗಳಿದ್ದಾರೆ. ಹಕ್ಕಿಪಿಕ್ಕಿಗಳು ಅಲೆಮಾರಿಗಳಾಗಿದ್ದು, ಪಾಲಕರು ಮಕ್ಕಳನ್ನು ಈ ಆಶ್ರಮ ಶಾಲೆಯಲ್ಲಿ ಬಿಟ್ಟು ಬೇರೆ ಜಿಲ್ಲೆ, ರಾಜ್ಯಗಳಿಗೆ ಉದ್ಯೋಗ ಅರಸಿಕೊಂಡು ಹೋಗಿರುತ್ತಾರೆ.
ಒಮ್ಮೆಲೇ ಈ ಶಾಲೆಯನ್ನು ಮುಚ್ಚಿದರೆ ಈ ಮಕ್ಕಳಿಗೆ ಗತಿಯಾರು? ಎಂದು ಶಾಲೆಯ ಎಸ್ಡಿಎಂಸಿ ಅಧ್ಯಕ್ಷರೂ ಆಗಿದ್ದ ಹೂರಾಜ ನುಡಿದರು.ಮಕ್ಕಳು ಹಾಗೂ ಸಮುದಾಯದ ಹಿರಿಯರು ಸಮಾಜ ಕಲ್ಯಾಣ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು. ಬಳಿಕ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುವ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.