ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸರೆ ಒದಗಿಸುವ ಕನಸು...

Last Updated 21 ಜನವರಿ 2011, 7:55 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ವಾಣಿ ವಿಲಾಸಪುರ ಜಿ.ಪಂ. ಕ್ಷೇತ್ರದಿಂದ ಆಯ್ಕೆಯಾಗಿರುವ ವಿಜಯಮ್ಮ ಎಂ. ಜಯಣ್ಣ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ರಾಜಕೀಯ ಕ್ಷೇತ್ರಕ್ಕೆ ಇಷ್ಟಪಟ್ಟು ಬಂದದ್ದೆ?
2007-08ರಲ್ಲಿ ನಗರದ ಕುವೆಂಪು ಬಡಾವಣೆಯಿಂದ ಜೆಡಿಎಸ್ ಪಕ್ಷದಿಂದ ಪುರಸಭಾ ಸದಸ್ಯಳಾಗಿ ಆಯ್ಕೆ ಆಗಿದ್ದೆ. ನನ್ನ ಪತಿ ಜಯಣ್ಣ ಸಂಪೂರ್ಣ ರಾಜಕೀಯದಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನನಗೆ ಆಸಕ್ತಿ ಇಲ್ಲದಿದ್ದರೂ ಪತಿಯ ಒತ್ತಾಸೆಯಿಂದ ಪುರಸಭೆಗೆ ಸ್ಪರ್ಧಿಸಿದ್ದೆ. ಈಗ ಜಿ.ಪಂ.ಗೆ ಸ್ಪರ್ಧಿಸಬೇಕಾಯಿತು.

* ಕ್ಷೇತ್ರದಲ್ಲಿ ತಮಗೆ ಕಂಡು ಬಂದಿರುವ ಪ್ರಮುಖ ಸಮಸ್ಯೆಗಳು?
ಚುನಾವಣಾ ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಹಳ್ಳಿಗಳ ಜನ ಬೇಡಿಕೆಗಳ ದೊಡ್ಡ ಪಟ್ಟಿಯನ್ನೇ ಮುಂದಿಡುತ್ತಿದ್ದರು. ಅದನ್ನು ನೆನೆಸಿ ಕೊಂಡರೆ ಭಯವಾಗುತ್ತದೆ. ಕ್ಷೇತ್ರದಲ್ಲಿ ಇರುವ ಇಷ್ಟೊಂದು ಸಮಸ್ಯೆಗಳನ್ನು ಹೇಗಪ್ಪಾ ಬಗೆಹರಿಸುವುದು ಎಂಬ ಜಿಜ್ಞಾಸೆ ಮೂಡಿತ್ತು. ಬಹಳಷ್ಟು ಗ್ರಾಮಗಳಲ್ಲಿ ಶುದ್ಧವಾದ ಕುಡಿಯುವ ನೀರು ಸಿಗುತ್ತಿಲ್ಲ. ನಿರ್ವಹಣೆಯ ಕೊರತೆಯಿಂದ ರಸ್ತೆಗಳು ಹಾಳಾಗಿವೆ. ಗುಡಿಸಲಲ್ಲಿ ವಾಸಿಸುವವರ ಸಂಖ್ಯೆ ಕಡಿಮೆ ಆಗಿಲ್ಲ. ವಾಣಿವಿಲಾಸ ಜಲಾಶಯಕ್ಕೆ ನೀರು ತರುವ ಯೋಜನೆ ಕಾರ್ಯಗತವಾಗಿಲ್ಲ. ಜಲಾಶಯವನ್ನು ಸುಂದರ ಪ್ರವಾಸಿ ತಾಣವನ್ನಾಗಿ ಮಾಡುವ ಪ್ರಯತ್ನ ನಡೆದಿಲ್ಲ. ವಿದ್ಯುತ್ ಸಮಸ್ಯೆ ಇದೆ.

* ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಪರಿಸ್ಥಿತಿ ಹೇಗಿದೆ?
ವಾಣಿವಿಲಾಸಪುರದಲ್ಲಿ ಸರ್ಕಾರಿ ಪಿಯು ಕಾಲೇಜು ಇದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬಹುತೇಕ ವಿದ್ಯಾರ್ಥಿಗಳು ಹಿರಿಯೂರಿಗೆ ಹೋಗುತ್ತಾರೆ. ಹಿಂದಿನ ಅವಧಿಯಲ್ಲಿ ನಮ್ಮ ಪಕ್ಷದವರೇ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು, ಉತ್ತಮ ಆಸ್ಪತ್ರೆ ನಿರ್ಮಿಸಿದ್ದಾರೆ. ವೈದ್ಯರ ಬಗೆಗೆ ಮೆಚ್ಚುಗೆ ಇದೆ.

* ಅಧಿಕಾರದ ಅವಧಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಸಾಧ್ಯವೆ?
ಹಳ್ಳಿಯಿಂದ ದಿಲ್ಲಿಯವರೆಗೆ ನನ್ನ ಪತಿ ಎಂ. ಜಯಣ್ಣ ಅವರಿಗೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರ ನಿಕಟ ಸಂಪರ್ಕ ಇದೆ. ಅದನ್ನು ಬಳಸಿ ಕೊಂಡು ಹೆಚ್ಚಿನ ಅನುದಾನ ತರುತ್ತಾರೆಂಬ ನಿರೀಕ್ಷೆ ಇದೆ. ಜಿ.ಪಂ. ಚುನಾವಣೆಯಲ್ಲೂ ಪತಿಯ ಒತ್ತಡದ ಮೇರೆಗೆ ಸ್ಪರ್ಧೆಗೆ ಇಳಿದಿದ್ದೆ. ಈಗ ಕ್ಷೇತ್ರದ ಅಭಿವೃದ್ಧಿ ನೋಡಿಕೊಳ್ಳುವ ಹೊಣೆಗಾರಿಕೆ ನನ್ನಷ್ಟೇ ಅವರಿಗೂ ಇದೆ. ಪತಿಯ ಸಹಕಾರದೊಂದಿಗೆ ಎಲ್ಲಾ ಸಮಸ್ಯೆಗೂ ಪರಿಹಾರ ಕಂಡು ಹಿಡಿಯುವ ವಿಶ್ವಾಸ ಇದೆ.

* ಸರ್ಕಾರದಿಂದ ನಿರೀಕ್ಷಿತ ಅನುದಾನ ಬರುವ ಭರವಸೆ ಇದೆಯೇ?
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ನಾವು ಪ್ರಮುಖ ವಿರೋಧ ಪಕ್ಷವಾಗಿರುವ ಜೆಡಿಎಸ್‌ಗೆ ಸೇರಿದ್ದೇವೆ. ಯಾವುದೇ ಸರ್ಕಾರವಿರಲಿ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಸಲ್ಲದು. ಅನುದಾನ ಬಿಡುಗಡೆ ಮಾಡುವಲ್ಲಿ ರಾಜಕೀಯ ಮಾಡಿದರೆ, ಅದನ್ನು ನಾವು ಜನರ ಗಮನಕ್ಕೆ ತರಬೇಕಾಗುತ್ತದೆ. ಹೋರಾಟ ಮಾಡಿಯಾದರೂ ಅನುದಾನ ತರುವ ಭರವಸೆ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT