ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸಿಡ್ ದಾಳಿ: ಕೇಂದ್ರದ ನಿರ್ಲಕ್ಷ್ಯ

Last Updated 14 ಜುಲೈ 2013, 19:59 IST
ಅಕ್ಷರ ಗಾತ್ರ

ಆಸಿಡ್ ದಾಳಿಗೆ ಗುರಿಯಾಗುವ ಯುವತಿಯರು  ಜೀವನಪರ್ಯಂತ ನರಳುವಂತೆ ಮಾಡುವ  ಆಮ್ಲೀಯ ದ್ರಾವಣವು ಮಾರುಕಟ್ಟೆಯಲ್ಲಿ ಸುಲಭವಾಗಿ ಮಾರಾಟಗೊಳ್ಳುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಿರುವುದು ಈಗ ಸುಪ್ರೀಂಕೋರ್ಟ್‌ನ ತೀವ್ರ ಟೀಕೆಗೆ ಗುರಿಯಾಗಿದೆ.

ಮಹಿಳೆಯಿಂದ ತನಗೆ ಅನ್ಯಾಯವಾಗಿದೆ ಎಂದು ಮನಸ್ಸಿನಲ್ಲಿ ಭ್ರಾಂತಿ ತುಂಬಿಕೊಂಡ ಹೇಡಿಗಳು, ಭಗ್ನಪ್ರೇಮಿಗಳು,  ಸೇಡು ತೀರಿಸಿಕೊಳ್ಳುವ ತವಕದಲ್ಲಿ  ಅಸಹಾಯಕ ಹೆಣ್ಣುಮಕ್ಕಳ ಮೇಲೆ ಆಸಿಡ್ ಎರಚಿ ಅವರು ಜೀನವಪೂರ್ತಿ ನರಳುವಂತೆ ಮಾಡುತ್ತಾರೆ. ದೇಶದಾದ್ಯಂತ ಇಂತಹ ಅಸಂಖ್ಯೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮಾರುಕಟ್ಟೆಯಲ್ಲಿ ಆಸಿಡ್ ಸುಲಭವಾಗಿ ಸಿಗುವುದೇ ಇದಕ್ಕೆ ಮುಖ್ಯ ಕಾರಣ.

ಕೋರ್ಟ್ ಸಲಹೆ
ಹನ್ನೊಂದು ತಿಂಗಳ ಹಿಂದೆಯೇ ಆಸಿಡ್ ಮಾರಾಟದ ಮೇಲೆ ನಿರ್ಬಂಧ ವಿಧಿಸಲು ಸವೋಚ್ಚ ನ್ಯಾಯಾಲಯ ಕೇಂದ್ರಕ್ಕೆ ಸಲಹೆ ನೀಡಿತ್ತು. ಈ ಸಂಬಂಧ ಕೇಂದ್ರ ಸರ್ಕಾರವು ಯಾವುದೇ ಕರಡು ಪ್ರಸ್ತಾವ ಅಥವಾ ಆದೇಶ ಹೊರಡಿಸದಿರುವುದು ಕೋರ್ಟ್‌ನ ಅಸಮಾಧಾನಕ್ಕೆ ಕಾರಣವಾಗಿದೆ.

ಒಂದೆಡೆ ಆಸಿಡ್ ಸಂತ್ರಸ್ತರು ಪ್ರತಿ ದಿನ ನರಳುತ್ತ ಹಿಂಸೆ ಅನುಭವಿಸುತ್ತಿದ್ದರೆ, ಸರ್ಕಾರ ಆಸಿಡ್ ಮಾರಾಟ ನಿಷೇಧಕ್ಕೆ ಸಮಯಾವಕಾಶ ಕೇಳುತ್ತಿರುವುದಕ್ಕೆ ನ್ಯಾಯಮೂರ್ತಿಗಳು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.

ಬದುಕು ಹಾಳು ಮಾಡುವ ಆಸಿಡ್
ಆಸಿಡ್ ದಾಳಿ ನಡೆಯುವ ಘಟನೆಗಳು ವಿರಳವಾಗಿ ಏನೂ ನಡೆಯಲಾರವು. ದೇಶದ ವಿವಿಧ ಭಾಗಗಳಲ್ಲಿ  ಮೇಲಿಂದ ಮೇಲೆ ಘಟಿಸುತ್ತಲೇ ಇರುತ್ತವೆ. ಆಸಿಡ್ ದಾಳಿಗೆ ಒಳಪಟ್ಟ ಕೆಲವರು ದೈಹಿಕ, ಮಾನಸಿಕ ನೋವು, ಹಿಂಸೆ ಸಹಿಸಿಕೊಳ್ಳಲಾರದೆ ಸಾವಿಗೆ ಶರಣಾದ ಅಸಂಖ್ಯ ನಿದರ್ಶನಗಳಿವೆ.

ಮಹಿಳೆಯರ ಬೆನ್ನು ಹತ್ತಿ ಅವರ ಮನಗೆಲ್ಲಲು ಹತಾಶ ಯತ್ನ ನಡೆಸುವ ದುರುಳರು,  ಅವರ ಬಾಳನ್ನೇ ಹಾಳು ಮಾಡಲು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಾರೆ.

ಮಹಿಳೆಯರ ಮುಖ ವಿರೂಪಗೊಳಿಸುವ ಏಕೈಕ ಉದ್ದೇಶದಿಂದ ಸೇಡಿನ ಮನೋಭಾವದ ಪುರುಷರು ಎರಚುವ ಆಸಿಡ್‌ನಿಂದ, ದಾಳಿಗೆ ಒಳಗಾದವರ ಚರ್ಮ ಸುಟ್ಟು ಹೋಗಿ ನರಕಯಾತನೆ ಅನುಭವಿಸುತ್ತಾರೆ. ಕೆಲ ಪ್ರಕರಣಗಳಲ್ಲಿ ಸಾವು ಕೂಡ ಸಂಭವಿಸುತ್ತದೆ.

ಲಕ್ಷ್ಮೀಯ ಹೋರಾಟ

ಆಸಿಡ್ ದಾಳಿಗೆ ಒಳಗಾದ ದೆಹಲಿಯ ಲಕ್ಷ್ಮೀ, ಇಂತಹ ಅಮಾನವೀಯ ದಾಳಿ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದಾಳೆ. ಲಕ್ಷ್ಮೀ, 2006ರ್ಲ್ಲಲಿಯೇ  ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸ್ದ್ದಿದಾಳೆ. ಭಾರತೀಯ ದಂಡ ಸಂಹಿತೆ (ಐಪಿಸಿ), ಭಾರತೀಯ ಸಾಕ್ಷ್ಯ,  ಅಪರಾಧ ದಂಡಸಂಹಿತೆಗಳಿಗೆ (ಸಿಆರ್‌ಪಿಸಿ) ತಿದ್ದುಪಡಿ ತಂದು ಹೊಸ ಸಮಗ್ರ ಕಾಯ್ದೆ ರೂಪಿಸಲು ಒತ್ತಾಯಿಸ್ದ್ದಿದಾಳೆ.

ಆಕೆಯ ನಿರಂತರ ಪ್ರಯತ್ನ ಮತ್ತು ಕೋರ್ಟ್ ಅದಕ್ಕೆ ಸೂಕ್ತವಾಗಿ ಸ್ಪಂದಿಸಿದ್ದರಿಂದ ಭಾರತೀಯ ದಂಡ ಸಂಹಿತೆಯಡಿ ಆಸಿಡ್ ದಾಳಿಯನ್ನು ಪ್ರತ್ಯೇಕ ಅಪರಾಧ ಎಂದೇ ಪರಿಗಣಿಸಲು ಈಗ ಸಾಧ್ಯವಾಗಿದ್ದರೂ, ಪ್ರಕರಣವು ಏಳು ವರ್ಷಗಳಿಂದ ಅಂತಿಮವಾಗಿ ಇತ್ಯರ್ಥವಾಗದೇ ಉಳಿದುಕೊಂಡಿದೆ.

ಸುಲಭವಾಗಿ ಲಭ್ಯ
ಮನೆಯ ಶೌಚಾಲಯ ಸ್ವಚ್ಛಗೊಳಿಸಲು ಬಳಸುವ  ಅಗ್ಗದ ಆಮ್ಲೀಯ ದ್ರಾವಣವಾಗಿರುವ ಆಸಿಡ್, ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ. ಯಾರೇ ಆಗಲಿ, ರೂ. 30 ಕೊಟ್ಟು 750 ಮಿಲಿ ಲೀಟರ್‌ನ ಆಸಿಡ್ ಬಾಟಲಿಯನ್ನು ಯಾವುದೇ ಭಯ, ನಿಬಂಧನೆ ಇಲ್ಲದೇ  ಖರೀದಿಸಬಹುದು.

ನಿರ್ಬಂಧ ಕ್ರಮಗಳು
ಮಾರುಕಟ್ಟೆಯಲ್ಲಿ ಆಸಿಡ್ ಸುಲಭವಾಗಿ ದೊರೆಯಬಾರದು. ಆಸಿಡ್ ಮಾರಾಟಗಾರರಿಗೆ ಲೈಸನ್ಸ್ ನೀಡಬೇಕು. ಖರೀದಿದಾರರ ಗುರುತನ್ನು ಕಡ್ಡಾಯವಾಗಿ ದಾಖಲಿಸಿಕೊಳ್ಳಬೇಕು, ಅರ್ಜಿ ನಮೂನೆಯಲ್ಲಿ ವೈಯಕ್ತಿಕ ವಿವರ ಮತ್ತು ಖರೀದಿ  ಉದ್ದೇಶ ಬರೆಯಬೇಕು. ಕೈಗಾರಿಕೆಗಳಿಗೆ ಬಳಸದ ಆಸಿಡ್ ದುರ್ಬಲ ರೂಪದಲ್ಲಿ ಮಾರಾಟ ಮಾಡಬೇಕು. ಆಸಿಡ್ ದಾಳಿಗೆ ಒಳಗಾದವರ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎನ್ನುವುದು ಆಸಿಡ್ ಸಂತ್ರಸ್ತರ ಪರವಾಗಿ ಹೋರಾಟ ನಡೆಸುತ್ತಿರುವ ಸ್ವಯಂ ಸೇವಾ ಸಂಘಟನೆಗಳ ಹಕ್ಕೊತ್ತಾಯಗಳಾಗಿವೆ.

ಕೇಂದ್ರ - ರಾಜ್ಯ ಸಹಮತ ಅಗತ್ಯ
ಕೇಂದ್ರ ಸರ್ಕಾರವು ಆಸಿಡ್ ಮಾರಾಟ ನಿಷೇಧಿಸಲು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಒಮ್ಮತದ ತೀರ್ಮಾನಕ್ಕೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಈ ವರ್ಷದ ಏಪ್ರಿಲ್ 16 ರಂದು ನೀಡಿದ್ದ ಭರವಸೆ ಈಡೇರಿಕೆಗೆ ಕೇಂದ್ರ ಸರ್ಕಾರ ಇನ್ನೂ ಕಾರ್ಯಪ್ರವೃತ್ತವಾಗಿಲ್ಲ.
ಆಸಿಡ್ ದಾಳಿ ನಿಯಂತ್ರಣ, ದಾಳಿಗೆ ಒಳಗಾದವರಿಗೆ ನೀಡುವ ಪರಿಹಾರ, ಇಂತಹ ಸಂತ್ರಸ್ತರ ಪುನರ್ವಸತಿಗೆ ಸಂಬಂಧಿಸಿದಂತೆ ಸಮಗ್ರ ಸ್ವರೂಪದ ಕಾಯ್ದೆಯನ್ನು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ರೂಪಿಸಲೂ ಕೋರ್ಟ್ ಸಲಹೆ ನೀಡಿತ್ತು.

ಜೀವಾವಧಿ ಶಿಕ್ಷೆ
ಸದ್ಯಕ್ಕೆ, `ಕ್ರಿಮಿನಲ್ ಕಾಯ್ದೆ (ತಿದ್ದುಪಡಿ) ಸುಗ್ರೀವಾಜ್ಞೆ 2013'ರ ಅನ್ವಯ,  ಆಸಿಡ್ ದಾಳಿ ನಡೆಸಿದವರಿಗೆ ಭಾರತೀಯ ದಂಡ ಸಂಹಿತೆಯಡಿ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT