ನವದೆಹಲಿ (ಐಎಎನ್ಎಸ್): ಆಸಿಡ್ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಆಸಿಡ್ ಮಾರಾಟ ಕುರಿತಂತೆ ಪರಿಣಾಮಕಾರಿಯಾದ ನಿಯಂತ್ರಣ ನೀತಿ ರೂಪಿಸಲು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರ ಸಭೆ ಕರೆಯಬೇಕೆಂದು ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶಿಸಿತು.
ನ್ಯಾಯಮೂರ್ತಿ ಆರ್.ಎಮ್.ಲೋಧಾ ಅವರ ನೇತೃತ್ವದ ನ್ಯಾಯಪೀಠವು ಆಸಿಡ್ ಮಾರಾಟ ನಿಯಂತ್ರಣ ನೀತಿ ರೂಪಿಸುವ ಜತೆಗೆ ಆಸಿಡ್ ದಾಳಿಗೆ ಒಳಗಾದವರಿಗೆ ಚಿಕಿತ್ಸೆ ನಂತರದ ಕಾಳಜಿ ಹಾಗೂ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ನೀತಿ ರೂಪಿಸಬೇಕು ಎಂದು ಹೇಳಿತು.
ಇದೇ ವೇಳೆ ನ್ಯಾಯಾಲಯವು ಆಸಿಡ್ ದಾಳಿಗೆ ಒಳಗಾದವರಿಗೆ ಪರಿಹಾರ ನೀತಿ ಸೇರಿದಂತೆ ಈ ಉದ್ದೇಶಕ್ಕಾಗಿಯೇ ಪ್ರತ್ಯೇಕ ಶಾಖೆಯೊಂದನ್ನು ತೆರೆಯುವ ಕುರಿತು ಸಭೆಯಲ್ಲಿ ಯೋಜನೆ ರೂಪಿಸಬೇಕು ಎಂದು ತಿಳಿಸಿತು.