ಬೆಂಗಳೂರು: ಇದೇ ಮೊದಲ ಬಾರಿಗೆ ಕನ್ನಡದ ಎರಡು ಚಲನಚಿತ್ರಗಳು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ವಿದೇಶ ವಿಭಾಗದ ಪ್ರವೇಶಕ್ಕೆ ಸ್ಪರ್ಧೆ ನಡೆಸಲು ಆಯ್ಕೆಯಾಗಿವೆ. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ, ದರ್ಶನ್ ನಾಯಕ ನಟರಾದ ‘ಸಂಗೊಳ್ಳಿ ರಾಯಣ್ಣ’ ಮತ್ತು ನೀನಾಸಂ ಸತೀಶ್ ಅಭಿನಯದ ‘ಲೂಸಿಯಾ’ ಈ ಹೆಮ್ಮೆ ಹೊಂದಿದ ಚಿತ್ರಗಳು.
2013ನೇ ಸಾಲಿನ ಆಸ್ಕರ್ ಪ್ರಶಸ್ತಿಯ ವಿದೇಶ ವಿಭಾಗದಲ್ಲಿ ಸ್ಪರ್ಧೆಗೆ ಭಾರತದಿಂದ ಒಂದು ಅತ್ಯುತ್ತಮ ಚಲನಚಿತ್ರ ಆಯ್ಕೆ ಮಾಡಿ ಕಳುಹಿಸಬೇಕಿದೆ. ಅದಕ್ಕಾಗಿ ಹಿಂದಿ, ತಮಿಳು, ತೆಲುಗು, ಇಂಗ್ಲಿಷ್, ಬಂಗಾಳಿ, ಮಲಯಾಳಂ ಮುಂತಾದ ಭಾಷೆಗಳಿಂದ ಒಟ್ಟು 20 ಸಿನಿಮಾಗಳು ಅಂತಿಮ ಸುತ್ತಿನಲ್ಲಿವೆ. ಈ ಪಟ್ಟಿಯಲ್ಲಿ ಕನ್ನಡದ ‘ಸಂಗೊಳ್ಳಿ ರಾಯಣ್ಣ’ ಮತ್ತು ‘ಲೂಸಿಯಾ’ ಚಿತ್ರಗಳು ಸ್ಥಾನ ಪಡೆದಿವೆ.
ಈ 20 ಸಿನಿಮಾಗಳನ್ನು ಹೈದರಾಬಾದ್ನಲ್ಲಿ ಇದೇ 17ರಿಂದ ಆಯ್ಕೆ ಸಮಿತಿಯ ಸದಸ್ಯರು ವೀಕ್ಷಿಸಿ ಅಂತಿಮ ತೀರ್ಮಾನ ಕೈಗೊಳ್ಳುವರು. ಈ ಆಯ್ಕೆ ಸಮಿತಿಯ ಸದಸ್ಯರಾಗಿ ಕನ್ನಡದ ಖ್ಯಾತ ನಿರ್ದೇಶಕ ಪಿ.ರಾಮದಾಸ ನಾಯ್ಡು ಮತ್ತು ಕವಿತಾ ಲಂಕೇಶ್ ಅವರೂ ಇದ್ದಾರೆ. ಇದು ಕನ್ನಡಿಗರ ಮಟ್ಟಿಗೆ ಹೆಮ್ಮೆಯ ಸಂಗತಿ.
ಅಂತಿಮ ಸುತ್ತಿನ ಆಯ್ಕೆಗೆ ಬಂದಿರುವ 20 ಭಾರತೀಯ ಸಿನಿಮಾಗಳಲ್ಲಿ ಹಿಂದಿಯಲ್ಲಿ ಶ್ರೀದೇವಿ ಅಭಿನಯದ ‘ಇಂಗ್ಲಿಷ್ ವಿಂಗ್ಲಿಷ್’, ಫರಾನ್ ಅಖ್ತರ್ ಅಭಿನಯದ ‘ಭಾಗ್ ಮಿಲ್ಖಾ ಭಾಗ್’, ‘ಕಾಯ್ ಪೋ ಚೆ’, ‘ಲುಟೇರಾ’, ‘ಮದ್ರಾಸ್ ಕೆಫೆ’, ತಮಿಳಿನ ಕಮಲಹಾಸನ್ ಅಭಿನಯದ ‘ವಿಶ್ವರೂಪಂ’, ‘ನೀರು ಪೂರಮೈ’, ತೆಲುಗಿನ ‘ಚದುವು ಕೋವಾಲಿ’, ‘ಮಿಥುನಂ’, ‘ಅಮ್ಮಾ ನೀ ಕುವರನಂ’, ಮಲಯಾಳಂನ ‘ಮುಂಬೈ ಪೊಲೀಸ್’ ಮತ್ತು ‘ಸೆಲ್ಯುಲಾಯ್ಡ’ ಸಿನಿಮಾಗಳು ಇವೆ. ಅಲ್ಲದೆ ಬಂಗಾಳಿಯ ಎರಡು, ಗುಜರಾತಿನ ಮತ್ತು ಮರಾಠಿ ತಲಾ ಒಂದು ಸಿನಿಮಾಗಳು ಸೇರಿವೆ.
ಭಾರತದಿಂದ ಆಸ್ಕರ್ ಪ್ರಶಸ್ತಿಯ ವಿದೇಶಿ ವಿಭಾಗದ ಸ್ಪರ್ಧೆಗೆ ಒಂದೇ ಚಲನಚಿತ್ರ ಆಯ್ಕೆ ಆಗುವುದಾದರೂ, ಛಾಯಾಗ್ರಹಣ, ವಸ್ತ್ರವಿನ್ಯಾಸ, ಶಬ್ದಗ್ರಹಣ ಮುಂತಾಗಿ ವಿವಿಧ ತಾಂತ್ರಿಕ ವಿಭಾಗಗಳಲ್ಲಿ ಸ್ಪರ್ಧೆಗೆ ಎಷ್ಟು ಸಿನಿಮಾಗಳನ್ನು ಬೇಕಿದ್ದರೂ ಆಯ್ಕೆ ಮಾಡಿ ಕಳುಹಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.