ವಿಜಾಪುರ: `ಮಾಸ್ಟರ್ ಪ್ಲಾನ್ ಜಾರಿಯಿಂದ ತೆರವುಗೊಳ್ಳಲಿರುವ ಆಸ್ತಿಗಳ ಮಾಲೀಕರಿಗೆ ಮಾರುಕಟ್ಟೆ ದರದ ಐದು ಪಟ್ಟು ಪರಿಹಾರ ನೀಡಬೇಕು~ ಎಂದು ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.
ವಿಜಾಪುರ ನಗರದಲ್ಲಿಯ ಮಾಸ್ಟರ್ ಪ್ಲಾನ್ ಜಾರಿ ಕುರಿತು ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಭಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಅವರು ಮಾತನಾಡಿದರು.
`ಆಸ್ತಿಗಳ ಮಾಲೀಕರಿಗೆ ಪರಿಹಾರ ನೀಡಲು ಒಪ್ಪಿಕೊಂಡಿರುವುದು ಸ್ವಾಗತಾರ್ಹ. ಆದರೆ, ಉಪ ನೋಂದಣಾಧಿಕಾರಿಗಳ ಕಚೇರಿ ಮೌಲ್ಯದಷ್ಟು ಪರಿಹಾರ ನೀಡಿದರೆ ಅನ್ಯಾಯವಾಗುತ್ತದೆ. ಆ ಮೌಲ್ಯದ ಐದು ಪಟ್ಟು ಪರಿಹಾರ ನೀಡಬೇಕು~ ಎಂದು ಒತ್ತಾಯಿಸಿದರು.
`ನಗರ ಯೋಜನಾ ಪ್ರದೇಶದಲ್ಲಿ ಮೂರು ನಕ್ಷೆಗಳಿವೆ. ರಾಜಕಾರಣಿಗಳು- ಪ್ರಭಾವಿ ವ್ಯಕ್ತಿಗಳ ಆಸ್ತಿಗಳನ್ನು ರಕ್ಷಿಸಿ
ಬಡವರ ಆಸ್ತಿಗಳನ್ನು ಒಡೆದು ಹಾನಿ ಮಾಡುವುದು ಬೇಡ. ಈ ತಾರತಮ್ಯ ತಪ್ಪಿಸಲು ಸಾರ್ವಜನಿಕರ ಸಮ್ಮುಖದಲ್ಲಿ ಪಾರದರ್ಶಕವಾಗಿ ಅಳತೆ ಮಾಡಬೇಕು~ ಎಂದರು.
`ಪರಿಹಾರ ನೀಡಿ ಕೆಡವಿ ಹಾಕಿದ ನಂತರ ಉಳಿಯುವ ಕಟ್ಟಡದ ಭಾಗವನ್ನು ರಿಪೇರಿ ಮಾಡಿಕೊಳ್ಳಲು ಅಥವಾ ಪುನರ್ ನಿರ್ಮಿಸಲಿಕ್ಕೆ ಪ್ರಾಚ್ಯವಸ್ತು ಸರ್ವೇಕ್ಷಣ ಇಲಾಖೆಯಿಂದ ಮೊದಲೇ ಅನುಮತಿ ಕೊಡಿಸಬೇಕು. ನೀವು ಕೆಡವಿ ಹಾಕಿದ ನಂತರ ಅವರು ಪರವಾನಿಗೆ ನೀಡಿದ್ದರೆ ಆ ಆಸ್ತಿಗಳೆಲ್ಲ ಹಾಳಾಗುತ್ತವೆ. ಈ ಗೊಂದಲವನ್ನು ನಿವಾರಿಸಬೇಕು~ ಎಂದು ಮನವಿ ಮಾಡಿದರು.
`ಈ ಎಲ್ಲ ಬೇಡಿಕೆಗಳ ಬಗ್ಗೆ ಜಿಲ್ಲಾ ಆಡಳಿತ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಎಷ್ಟು ಸಾಧ್ಯವೋ ಅಷ್ಟು ಹೆಚ್ಚಿನ ಪರಿಹಾರ ನೀಡಲು ಸರ್ಕಾರಕ್ಕೆ ಮನವಿ ಮಾಡುತ್ತೇವೆ~ ಎಂದು ಪ್ರಭಾರ ಜಿಲ್ಲಾಧಿಕಾರಿ ಕಾಶಿನಾಥ ಪವಾರ ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ಜೆಡಿಎಸ್ ಮುಖಂಡ ವಿಜಯಕುಮಾರ ಪಾಟೀಲ, ಸಿದ್ಧೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ದಾನಪ್ಪ ಕಟ್ಟಿಮನಿ, ಚಿದಾನಂದ ಇಟ್ಟಂಗಿ, ರವೀಂದ್ರ ಕುಲಕರ್ಣಿ, ಗುರು ಗಚ್ಚಿನಮಠ ಇತರರು ಸಭೆಯಲ್ಲಿದ್ದರು.