ಗಂಗಾವತಿ: ಹಣ ಮತ್ತು ಆಸ್ತಿ ಸಂಬಂಧ ಇಬ್ಬರು ಸಂಬಂಧಿಕರ ನಡುವೆ ವಾಗ್ವಾದ ನಡೆದು, ಒಬ್ಬ ಮತ್ತೊಬ್ಬನ ಮೇಲೆ ಗುಂಡು ಹಾರಿಸಿದ ಘಟನೆ ಗ್ರಾಮೀಣ ಠಾಣೆ ವ್ಯಾಪ್ತಿಯ ಆರ್ಹಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಯರಡೋಣದ ಚನ್ನನಗೌಡ ಶಿವಪೂಜಿಗೆ ಅವರಿಗೆ ಗುಂಡೇಟಿನಿಂದ ತಲೆಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಜಯನಗರ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಗುಂಡು ಹಾರಿಸಿದ ಬಸವರಾಜ ಹೊಸಳ್ಳಿ ಎಂಬಾತನನ್ನು ಬಂಧಿಸಿರುವ ಗ್ರಾಮೀಣ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಘಟನೆ ವಿವಿರ: ‘ಸೋದರ ಸಂಬಂಧಿಯಾದ ಬಸವರಾಜನ ಕುಟುಂಬಕ್ಕೆ ಹಣಕಾಸಿನ ಅಡಚಣೆ ಉಂಟಾದಾಗ ಮಧ್ಯಸ್ಥಿಕೆ ವಹಿಸಿದ್ದ ಚನ್ನನಗೌಡ
ಶಿವಪೂಜಿ ಬೇರೆಯವರಿಂದ ಹಣ ಕೊಡಿಸಿದ್ದರು.
ಹಣ ಮರಳಿಸಿದೆ ಮೂರು ವರ್ಷದಿಂದ ಬಸವರಾಜ ಸತಾಯಿಸುತ್ತಿದ್ದರು. ಶನಿವಾರ ಪ್ರಕರಣ ಸಂಬಂಧ ಪರಸ್ಪರ ಮಾತಿನ ಚಕಮಕಿ ನಡೆದಿದೆ.
ಸೋಮವಾರ ಹಣ ನೀಡುವ ಭರವಸೆ ನೀಡಿದ್ದ ಬಸವರಾಜ ಅವರ ಆಶ್ವಾಸನೆ ಮೇರೆಗೆ ಆರ್ಹಾಳಕ್ಕೆ ತೆರಳಿದ್ದ ಶಿವಪೂಜಿಯ ಮೇಲೆ ಬಸವರಾಜ ಏಕಾಏಕಿ ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ತಿಳಿದ ತಹಶೀಲ್ದಾರ್ ಎಂ.ಗಂಗಪ್ಪ ಕಲ್ಲೂರು, ನಗರಠಾಣೆ ಪಿಐ ಕಾಳಿಕೃಷ್ಣ ಆಸ್ಪತ್ರೆಗೆ ಭೇಟಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಗಂಗಾವತಿ ಡಿವೈಎಸ್ಪಿ ವಿನ್ಸಂಟ್ ಶಾಂತಕುಮಾರ, ಗ್ರಾಮೀಣ ಸಿಪಿಐ ರಮೇಶ ಧರ್ಮಟ್ಟಿ, ಗ್ರಾಮೀಣ ಪಿಎಸ್ಐ ಹನುಮರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಯಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.