ಸೊರಬ: ವೈದ್ಯರ ನೇಮಕಾತಿ, ಔಷಧ, ಮಾತ್ರೆ ಪೂರೈಕೆ ಹಾಗೂ ಆಸ್ಪತ್ರೆಗಳ ಸ್ವಚ್ಛತೆ ನಿರ್ವಹಣೆಗೆ ಆಗ್ರಹಿಸಿ ತಾಲ್ಲೂಕು ದಲಿತ ಸಂಘರ್ಷ ಸಮಿತಿಯವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಆಸ್ಪತ್ರೆಯಲ್ಲಿ ಅಗತ್ಯ ಇರುವ 7 ವೈದ್ಯರ ಬದಲು ಕೇವಲ ಇಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಮಾತ್ರೆ, ಔಷಧಗಳು ದೊರಕುತ್ತಿಲ್ಲ. ಇದರಿಂದಾಗಿ ಬಡ ಜನರಿಗೆ ಖಾಸಗಿ ಆಸ್ಪತ್ರೆ, ಔಷಧ ಅಂಗಡಿಗೆ ಹೋಗಿ ಅಪಾರ ಹಣ ತೆತ್ತು ಆರೋಗ್ಯ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಒದಗಿದೆ. ಜನ ಪ್ರತಿನಿಧಿಗಳು, ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.
ಆಸ್ಪತ್ರೆ ಎದುರು ರಸ್ತೆ ಸರಿ ಇಲ್ಲ. ಆವರಣದ ಸ್ವಚ್ಛಗೆ ಗಮನ ಕೊಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅವ್ಯವಸ್ಥೆ ಸರಿಪಡಿಸಲು ಒಂದು ತಿಂಗಳ ಗಡವು ನೀಡಿದರು. ಇಲ್ಲವಾದಲ್ಲಿ ಆಸ್ಪತ್ರೆ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ದಸಂಸ ತಾಲ್ಲೂಕು ಸಂಚಾಲಕ ಎ.ಡಿ. ನಾಗಪ್ಪ, ಗುರುರಾಜ್, ಬಿ. ಬಂಗಾರಪ್ಪ, ಎಂ. ಬಾಲಚಂದ್ರ, ರೇಣುಕಾ ಬಾಲಚಂದ್ರ, ಎಚ್.ಎಸ್. ಜಯಶೀಲಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.