ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆ ಆವರಣದಲ್ಲೇ ತ್ಯಾಜ್ಯ ಸಮಸ್ಯೆ

Last Updated 4 ಫೆಬ್ರುವರಿ 2011, 6:10 IST
ಅಕ್ಷರ ಗಾತ್ರ

ಬಂಗಾರಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳನ್ನು ಆಸ್ಪತ್ರೆಯ ಆವರಣದಲ್ಲಿ ಸುಡುವುದರಿಂದ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಳ್ಳುತ್ತಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ. ಪ್ರತಿವಾರ ಎದುರಾಗುವ ಈ ಸಮಸ್ಯೆಯಿಂದ ನಿವಾರಣೆ ಎಂದು? ಎಂಬುದು ಅನೇಕರ ಪ್ರಶ್ನೆಯಾಗಿದೆ.

 ಪಟ್ಟಣದ ಹೃದಯ ಭಾಗದಲ್ಲಿರುವ ಆಸ್ಪತ್ರೆಯ ಆವರಣದಲ್ಲಿಯೇ ಈ ತ್ಯಾಜ್ಯಗಳನ್ನು ಸುಡುತ್ತಿರುವುದರಿಂದ ಆಸುಪಾಸಿನ ನಿವಾಸಿಗಳು, ಅಂಗಡಿಗಳ ವ್ಯಾಪಾರಿಗಳಿಗೆ ಭರಿಸಲಾಗದ ದುರ್ವಾಸನೆ ಬರುತ್ತಿದೆ. ದಟ್ಟಹೊಗೆಯು ಸುತ್ತಮುತ್ತಲು ಹಬ್ಬುವುದರಿಂದ ಸಹಿಸಲಾಗದೇ ಈ ವಲಯದ ನಿವಾಸಿಗಳು, ಅಂಗಡಿಯವರು ಬಾಗಿಲು ಜಡಿಯಬೇಕಾದ ದುಃಸ್ಥಿತಿ ಎದುರಾಗಿದೆ. ರೋಗಮುಕ್ತಗೊಳಿಸಬೇಕಾದ ಆಸ್ಪತ್ರೆಯಿಂದಲೇ ಈ ರೀತಿಯ ತ್ಯಾಜ್ಯವಸ್ತು  ಸುಡುವಿಕೆಯಿಂದ  ಜನರಲ್ಲಿ ಆತಂಕ ಮೂಡಿಸಿದೆ.

ತ್ಯಾಜ್ಯ ಸುಡುವಾಗ ಪಟ್ಟಣದ ನಡುವೆ ಸುಟ್ಟ ವಾಸನೆ ಸದಾ ಬರುತ್ತಿದ್ದು ನಾಗರಿಕರ ನೆಮ್ಮದಿ ಹಾಳು ಮಾಡಿದೆ. ಸಮರ್ಪಕ, ವಿವಾದರಹಿತ ತ್ಯಾಜ್ಯವಸ್ತು ನಿರ್ವಹಣೆ ಬಗ್ಗೆ ಪಟ್ಟಣದ ನಾಗರಿಕರು ಅನೇಕ ಬಾರಿ ಆಸ್ಪತ್ರೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಬಹಳಷ್ಟು ಬಾರಿ ಇದೇ ವಿಷಯವಾಗಿ ಆಸ್ಪತ್ರೆಯ ಸಿಬ್ಬಂದಿಯೊಡನೆ ಸ್ಥಳೀಕರು ವಾಗ್ವಾದವನ್ನೂ ನಡೆಸಿದ್ದಾರೆ. ಆದರೆ ಸ್ಥಳೀಕರಿಂದ ಏನೇ ಪ್ರತಿರೋಧ ಬಂದರೂ ತ್ಯಾಜ್ಯ ವಸ್ತು ಸುಡುವಲ್ಲಿ ಆಸ್ಪತ್ರೆಯ ಸಿಬ್ಬಂದಿ ಹಿಮ್ಮೆಟ್ಟಿಲ್ಲ.

ಆಸ್ಪತ್ರೆಯ ತ್ಯಾಜ್ಯ ವಸ್ತುಗಳಲ್ಲಿ ರಕ್ತಸಿಕ್ತ, ಕೀವು ಸಮೇತವಿರುವ ಬ್ಯಾಂಡೇಜ್‌ಗಳು, ಭಿನ್ನಗೊಳಿಸಲಾದ ರೋಗಿಗಳ ಅಂಗಾಂಗಗಳು, ಕಾಲವಧಿ ಮೀರಿದ ವಿವಿಧ ಮಾತ್ರೆ, ಇಂಜೆಕ್ಷನ್, ಸಿರಪ್‌ಗಳೂ ಇರುತ್ತವೆ. ಇವನ್ನು ವಸತಿ ಪ್ರದೇಶದಲ್ಲಿ ತ್ಯಾಜ್ಯ ವಸ್ತುಗಳನ್ನು ಸುಡುವುದರಿಂದ ದುರ್ವಾಸನೆಯ ಜೊತೆಗೆ ರೋಗದ ಭಯವೂ ಕಾಡುತ್ತಿದೆ ಎನ್ನುತ್ತಾರೆ ಆಸ್ಪತ್ರೆಯ ಸಮೀಪದ ಹಾಪ್ ಕಾಮ್ಸ್ ಸಿಬ್ಬಂದಿ ಮಂಜುನಾಥ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT