ಮೂಡಿಗೆರೆ: ಹೆರಿಗೆಗೆಂದು ಬಣಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ತಾಯಿ ಮಗು ಸಾವಿಗೆ ಕಾರಣರಾದ ವೈದ್ಯರ ಮತ್ತು ಸಿಬ್ಬಂದಿ ವಿರುದ್ದ ಕ್ರಮ ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ತಾಲ್ಲೂಕಿನ ವಿವಿಧ ಸಂಘಟನೆಗಳು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದವು.
ಪ್ರವಾಸಿ ಮಂದಿರದಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವ ಣಗೆ ನಡೆಸಿದವು. ತಾಲ್ಲೂಕು ಕಚೇರಿ ಎದುರು ಮಾತನಾಡಿದ ಮುಖಂಡರು, ಬಿನ್ನಡಿ ಕಾಲೊನಿಯ ಲತಾ ಕುಟುಂಬಕ್ಕೆ ಐದು ಲಕ್ಷ ಪರಿಹಾರ, ಕರ್ತವ್ಯ ನಿರ್ಲಕ್ಷ್ಯ ತೋರಿದ ಬಣಕಲ್ ಹಾಗೂ ಮೂಡಿಗೆರೆ ವೈದ್ಯರು ಮತ್ತು ಇಬ್ಬರು ದಾದಿಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಣಕಲ್ ಆಸ್ಪತ್ರೆಗೆ ಖಾಯಂ ಮಹಿಳಾ ವೈದ್ಯರ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿ ಹೆಚ್ಚುವರಿ ತಹಸೀಲ್ದಾರ್ ಪುಷ್ಪರಾಜ್ ಅವರಿಗೆ ಮನವಿ ಸಲ್ಲಿಸಿದರು.
ಇನ್ನೂ 15ದಿನಗಳಲ್ಲಿ ಸೂಕ್ತ ಪರಿಹಾರ ನೀಡದಿದ್ದರೆ ತಾಲ್ಲೂಕಿನಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಘೋಷಿಸಿದರು.
ಪ್ರತಿಭಟನೆಯಲ್ಲಿ ಜಿಪಂ ಸದಸ್ಯರಾದ ಎಂ.ಎಸ್.ಅನಂತ್, ಜ್ಯೋತಿ ಹೇಮಶೇಖರ್,ಜಿಲ್ಲಾ ರೈತ ಸಂಘದ ಮುಖಂಡ ದುಗ್ಗಪ್ಪ ಗೌಡ, ದಯಾಕರ್, ಮಂಜುನಾಥ್, ಜಿಲ್ಲಾ ಜೆಡಿಯು ಅಧ್ಯಕ್ಷ ಭರತ್, ತಾಪಂ ಸದಸ್ಯ ದೇವರಾಜ್, ಕಿರುಗುಂದ ಅಬ್ಬಾಸ್, ಕೋಮುಸೌಹಾರ್ದ ವೇದಿಕೆಗೌಸ್ ಮೈದ್ದೀನ್, ಅಯುಬ್,ರಘು, ಬಿಎಸ್ಪಿ ಮುಖಂಡರಾದ ಉದುಸೆ ಮಂಜಯ್ಯ, ಲೋಕವಳ್ಳಿ ರಮೇಶ್, ಡಿಎಸ್ಎಸ್ ಜಿಲ್ಲಾ ಮುಖಂಡ ಮೂಡಿಗೆರೆ ನಂಜುಂಡ, ವೇಣುಗೋಪಾಲ್ ಪೈ ನೇತೃತ್ವ ವಹಿಸಿದ್ದರು.