ಬೆಂಗಳೂರು: `ವೈದ್ಯಕೀಯ ಶಿಕ್ಷಣಕ್ಕಾಗಿ ಒದಗಿಸಲಾದ ಆಸ್ಪತ್ರೆಗಳನ್ನು ಮತ್ತೆ ಆರೋಗ್ಯ ಇಲಾಖೆಗೆ ಸೇರ್ಪಡೆ ಮಾಡಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಪರಾಮರ್ಶಿಸಲು ಉಪ ಮುಖ್ಯಮಂತ್ರಿ ಆರ್. ಅಶೋಕ ಅವರ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿದೆ' ಎಂದು ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
`ಕಾನೂನು ಸಚಿವ ಎಸ್.ಸುರೇಶಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಮತ್ತು ಆರೋಗ್ಯ ಸಚಿವನಾದ ನಾನು ಸಮಿತಿ ಸದಸ್ಯರಾಗಿದ್ದೇವೆ' ಎಂದು ಹೇಳಿದರು. ಈಗಾಗಲೇ ಮೂರು ಆಸ್ಪತ್ರೆಗಳನ್ನು ಮರಳಿ ಪಡೆಯಲಾಗಿದ್ದು, ಮಿಕ್ಕ ಏಳು ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು.
`ಡಿ. 21ರಂದು ವೈದ್ಯರು ನಡೆಸಲು ಉದ್ದೇಶಿಸಿರುವ ಮುಷ್ಕರವನ್ನು ಕೈಬಿಟ್ಟು, ಸರ್ಕಾರದ ಜೊತೆ ಮಾತುಕತೆಗೆ ಬರಬೇಕು, ವರ್ಗಾವಣೆಗೆ ಸಂಬಂಧಿಸಿದಂತೆ ಅವರ ಬೇಡಿಕೆಯನ್ನು ಸರ್ಕಾರ ಆಗಲೇ ಈಡೇರಿಸಿದೆ. ಸಂಬಳದ ವಿಷಯವೂ ಚರ್ಚೆಯಲ್ಲಿದೆ. ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ಕೈಗೊಳ್ಳಬಾರದು' ಎಂದು ಮನವಿ ಮಾಡಿದರು.