ಡೆಹ್ರಾಡೂನ್ (ಪಿಟಿಐ): ಭಾನುವಾರ ಉಪವಾಸ ಸತ್ಯಾಗ್ರಹ ಕೊನೆಗೊಳಿಸಿದ ಬಾಬಾ ರಾಮ್ದೇವ್ ಅವರ ಆರೋಗ್ಯ ಈಗ ಸ್ಥಿರವಾಗಿದ್ದು ಮಂಗಳವಾರ ಆಸ್ಪತ್ರೆಯಿಂದ ಕಳುಹಿಸಲಾಗುವುದು ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ತಿಳಿಸಿದ್ದಾರೆ.
`ಅವರು ಹಣ್ಣು ಮತ್ತು ಹಣ್ಣಿನ ರಸ ಸೇವಿಸಿದ್ದು, ಯಾರ ನೆರವಿಲ್ಲದೆ ಎದ್ದು ಕುಳಿತುಕೊಳ್ಳುತ್ತಿದ್ದಾರೆ. ಆಸ್ಪತ್ರೆಯ ತಮ್ಮ ಕೊಠಡಿಯಲ್ಲಿ ನಡೆಯಲು ಶಕ್ತರಾಗಿದ್ದಾರೆ~ ಎಂದು ಹಿಮಾಲಯ ಆಸ್ಪತ್ರೆಯ ಡಾ. ಎಸ್.ಎಲ್. ಜೆಥಾನಿ ಹೇಳಿದ್ದಾರೆ.
ಬಾಬಾ ಆರೋಗ್ಯದ ಬಗ್ಗೆ ತೀವ್ರ ನಿಗಾ ಇಡಲಾಗಿದ್ದು ಪ್ರತಿ ಅರ್ಧ ಗಂಟೆಗೊಮ್ಮೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಸೋಮವಾರವೇ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗುವ ಇಂಗಿತ ವ್ಯಕ್ತಪಡಿಸಿದ್ದರು.
ಆದರೆ, ವೈದ್ಯರ ಸಲಹೆಯಂತೆ ತಮ್ಮ ನಿರ್ಧಾರವನ್ನು ಮಂಗಳವಾರಕ್ಕೆ ಮುಂದೂಡಲು ಒಪ್ಪಿಕೊಂಡಿದ್ದಾರೆ ಎಂದು ಜೆಥಾನಿ ತಿಳಿಸಿದ್ದಾರೆ. ಸ್ವಲ್ಪ ನಿಶ್ಯ ಕ್ತಿ ಹೊರತುಪಡಿಸಿದರೆ ಬೇರೆ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.