ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ-ಇಂಧನ ಭದ್ರತೆ ಅಗತ್ಯ

Last Updated 7 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಧಾರವಾಡ: “ಆಹಾರ ಭದ್ರತೆ ಹಾಗೂ ಇಂಧನ ಭದ್ರತೆ ಇದ್ದರೆ ಮಾತ್ರ ದೇಶ ಸುಭದ್ರತೆಯಿಂದ ಇರಲು ಸಾಧ್ಯ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿ ಜೈವಿಕ ಇಂಧನ ನೀತಿಯನ್ನು ಜಾರಿಗೊಳಿಸಲಾಗಿದೆ” ಎಂದು ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ ಹೇಳಿದರು.

ಇಲ್ಲಿನ ಗುಂಗರಗಟ್ಟಿಯ ಅರಣ್ಯ ತರಬೇತಿ ಕೇಂದ್ರದಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ಎರಡು ದಿನಗಳ ಜೈವಿಕ ಇಂಧನ ಬರಹಗಾರರ ಕಮ್ಮಟದಲ್ಲಿ ‘ಜೈವಿಕ ಇಂಧನ- ಸರ್ಕಾರದ ಬದ್ಧತೆ’ ವಿಷಯ ಕುರಿತು ಅವರು ಮಾತನಾಡಿದರು.

ಜೈವಿಕ ಇಂಧನ ಉತ್ಪಾದನೆ ಹೆಚ್ಚಿಸಲು ಸರ್ಕಾರ ಹಸಿರು ಹೊನ್ನು ಯೋಜನೆ ಜಾರಿಗೊಳಿಸಿದೆ. ಪ್ರಾಯೋಗಿಕವಾಗಿ ದಾವಣಗೆರೆ ಜಿಲ್ಲೆಯಲ್ಲಿ 2008-09ರಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವಿಸ್ತರಿಸಲಾಗುವುದು. ಬರಡು ಬಂಗಾರ ಯೋಜನೆ ಮೂಲಕ ಬರಡು ಮತ್ತು ಬಂಜರು ಭೂಮಿಯಲ್ಲಿ ಹಾಗೂ ಹೊಲ ಬದುಗಳಲ್ಲಿ ಜೈವಿಕ ಮರ  ಬೆಳೆಸಲು ಯೋಜಿಸಲಾಗಿದೆ ಎಂದರು.

ಕೀರ್ತನಕಾರ ಡಾ.ಲಕ್ಷ್ಮಣದಾಸ ಕಮ್ಮಟ ಉದ್ಘಾಟಿಸಿದರು.  ಕಮ್ಮಟದಲ್ಲಿ ಪಾಲ್ಗೊಂಡಿರುವ ಬರಹಗಾರರು ತಮ್ಮ ಲೇಖನಗಳ ಮೂಲಕ ಜೈವಿಕ ಇಂಧನ ಉತ್ಪಾದನೆ ಹೆಚ್ಚಿಸಲು ರೈತರಿಗೆ ಪ್ರೇರಣೆ ನೀಡಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಆರ್.ಹಂಚಿನಾಳ ಹೇಳಿದರು.

ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಕಮ್ಮಟದ ಉದ್ದೇಶ ವಿವರಿಸಿದರು. ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ.ವೀರಣ್ಣ ಅಧ್ಯಕ್ಷತೆ ವಹಿಸಿ, ವೈವಿಧ್ಯಮಯ ಜ್ಞಾನವನ್ನು ತಿಳಿದುಕೊಳ್ಳುವ ಹಸಿವು ಬರಹಗಾರರಲ್ಲಿ ಬರಬೇಕು. ರೈತರನ್ನು ಸಬಲೀಕರಣ ಮಾಡುವ ಕೆಲಸದಲ್ಲಿ ಜೈವಿಕ ಇಂಧನ ಮರಗಳ ಬೆಳೆಸುವಿಕೆ ಪಾತ್ರದ ಕುರಿತು ಬರಹಗಾರರು ಬೆಳಕು ಚೆಲ್ಲಬೇಕು ಎಂದರು.

ಮಂಡಳಿಯ ಎಂ.ಡಿ. ಜಿ.ಎಸ್.ಪ್ರಭು, ಎಲ್.ಎನ್.ಮುಕುಂದರಾಜು ಉಪಸ್ಥಿತರಿದ್ದರು. ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಸ್ವಾಗತಿಸಿದರು.  ಎಚ್.ಶಿವಶಂಕರ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT