ಶ್ರೀರಂಗಪಟ್ಟಣ: ಇಲ್ಲಿನ ಬೋವಿ ಕಾಲೋನಿ ಜನರು ಅಡುಗೆ ಅನಿಲ ಹೊಂದಿಲ್ಲದಿದ್ದರೂ ಪಡಿತರ ಚೀಟಿಗಳಲ್ಲಿ ಅನಿಲ ಎಂದು ನಮೂದಿಸಿರುವುದರಿಂದ ಸೀಮೆಎಣ್ಣೆ ಕೊಡುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಬೋವಿ ಜನರು ಬುಧವಾರ ಪಟ್ಟಣದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿಯಲ್ಲಿ ಧರಣಿ ನಡೆಸಿದರು.
ಆಹಾರ ಶಿರಸ್ತೇದಾರ್ ಕಚೇರಿಯಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಧರಣಿ ನಡೆಸಿದ ಬೋವಿ ಜನರು ಶಿರಸ್ತೇದಾರ್ ದಿವಾಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಕಾಲೋನಿಯಲ್ಲಿ ಒಂದು ಮನೆಯಲ್ಲೂ ಅಡುಗೆ ಅನಿಲ ಸಿಲಿಂಡರ್ ಇಲ್ಲ. ಆದರೂ ನಮಗೆ ವಿತರಿಸಿರುವ ಪಡಿತರ ಚೀಟಿಯಲ್ಲಿ ಅನಿಲ ಸಿಲಿಂಡರ್ ಹೊಂದಿರುವುದಾಗಿ ನಮೂದಿಸಲಾಗಿದೆ. ಹಾಗಾಗಿ ನ್ಯಾಯಬೆಲೆ ಅಂಗಡಿಗಳನ್ನು ನಮಗೆ ಸೀಮೆಎಣ್ಣೆ ಕೊಡುತ್ತಿಲ್ಲ.
ವಿದ್ಯುತ್ ಕಡಿತವಾದರೆ ಕತ್ತಲೆಯಲ್ಲಿ ದಿನ ದೂಡುತ್ತಿದ್ದೇವೆ ಎಂದು ಜಯಮ್ಮ, ರಾಮಮ್ಮ, ಪುಷ್ಪ ಇತರರು ಸಮಸ್ಯೆ ತೋಡಿಕೊಂಡರು. ಆಹಾರ ಇಲಾಖೆ ಅಧಿಕಾರಿಗಳ ಅಸಹನೆಯಿಂದ ಈ ಸಮಸ್ಯೆ ಉಂಟಾಗಿದೆ. ಕೂಲಿಯನ್ನೇ ನೆಚ್ಚಿಕೊಂಡು ಬದುಕುವ ಬೋವಿ ಜನರಿಗೆ ಸೀಮೆಎಣ್ಣೆ ವಿತರಿಸದೆ ಅನ್ಯಾಯ ಮಾಡಲಾಗುತ್ತಿದೆ.