ಮಡಿಕೇರಿ: ಇದುವರೆಗೆ ಅಗತ್ಯ ದಾಖಲೆಗಳನ್ನು ಒದಗಿಸದೇ ಅಮಾ ನತ್ತಿಗೆ ಒಳಗಾಗಿರುವ ಅಡುಗೆ ಅನಿಲ ಸಂಪರ್ಕಗಳಿಗೆ ಸಂಬಂಧಪಟ್ಟಂತೆ ಆಹಾರ ಹಾಗೂ ನಾಗರಿಕ ಇಲಾಖೆಗೆ ಸೂಕ್ತ ದಾಖಲಾತಿಗಳನ್ನು ಒದಗಿಸಿ ತಮ್ಮ ಸಂಪರ್ಕಗಳನ್ನು ಸಿಂಧುಗೊಳಿಸಿಕೊಂಡಲ್ಲಿ ಮಾತ್ರ ಅಡುಗೆ ಅನಿಲ ಸಿಲಿಂಡರ್ಗಳನ್ನು ನೀಡಲು ಸಾಧ್ಯ ಎಂದು ವೀರಾಜಪೇಟೆಯ ಹೆಚ್.ಪಿ.ಗ್ಯಾಸ್ (ರವಿರಾಜ್) ಏಜೆನ್ಸಿಯ ಮಾಲೀಕ ಪರಮಶಿವ ತಿಳಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ವಿತರಣಾ ಕೇಂದ್ರದ ಸ್ವಾಮ್ಯಕ್ಕೆ ಒಳಪಟ್ಟ 16,451 ಸಂಪರ್ಕಗಳ ಪೈಕಿ ಈಗಾಗಲೇ 5,110 ಸಂಪರ್ಕಗಳು ಅಮಾನತ್ತುಗೊಂಡಿವೆ ಎಂದರು.
ಅಮಾನತ್ತುಗೊಂಡ ಸಂಪರ್ಕಗಳಿಗೆ ತಕ್ಷಣದಿಂದಲೇ ಸಿಲಿಂಡರ್ಗಳನ್ನು ವಿತರಿಸದಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಾನತ್ತುಗೊಂಡಿರುವ ಸಂಪರ್ಕಗಳಿಗೆ ಸಿಲಿಂಡರ್ಗಳನ್ನು ವಿತರಿಸಲು ಸಾಧ್ಯವಿಲ್ಲ ಎಂದು ನುಡಿದರು.
ಅಮಾನತುಗೊಂಡಿರುವ ಎಲ್ಪಿಜಿ ಸಂಪರ್ಕಗಳ ಪೈಕಿ ನ್ಯಾಯಯುತವಾಗಿದ್ದರೆ ಅಂತಹವರು ಆಹಾರ ಇಲಾಖೆಗೆ ರೇಷನ್ಕಾರ್ಡ್, ಆರ್.ಆರ್. ಸಂಖ್ಯೆಗಳನ್ನು ಒದಗಿಸಿ ತಮ್ಮ ಸಂಪರ್ಕಗಳನ್ನು ಸಿಂಧುಗೊಳಿಸಬೇಕೆಂದು ಅವರು ಸಲಹೆ ನೀಡಿದರು.
ಗ್ರಾಹಕರು 9964023456 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ಸಿಲಿಂಡರ್ಗಳನ್ನು ಆನ್ಲೈನ್ ಬುಕಿಂಗ್ ಮಾಡಬಹುದಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಗ್ರಾಹಕರು ಸಿಲಿಂಡರ್ ಬುಕ್ ಮಾಡಲು ತಿಂಗಳಾಗಬೇಕೆಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಆನ್ಲೈನ್ನಲ್ಲಿ ಯಾವಾಗ ಬೇಕಾದರೂ ಬುಕ್ ಮಾಡಬಹುದಾಗಿದ್ದು, ಆಯಾ ಕುಟುಂಬಗಳ ಸದಸ್ಯರ ಸಂಖ್ಯೆಯ ಮಾನದಂಡದ ಆಧಾರದಲ್ಲಿ ಸಿಲಿಂಡರ್ ಪೂರೈಕೆಯಾಗಲಿದೆ ಎಂದು ವಿವರಣೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ವೀರಾಜಪೇಟೆ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಾಶಿ ಕಾವೇರಪ್ಪ ಮತ್ತು ಪಳನಿ ಪ್ರಕಾಶ್ ಉಪಸ್ಥಿತರಿದ್ದರು.