ನವದೆಹಲಿ (ಪಿಟಿಐ): 2015–16ನೆ ಸಾಲಿನಲ್ಲಿ ದೇಶದ 10 ರಾಜ್ಯಗಳಲ್ಲಿ ಬರ ಪರಿಸ್ಥಿತಿ ಉದ್ಭವಿಸಿದ್ದರಿಂದ ಆಹಾರ ಧಾನ್ಯಗಳ ಉತ್ಪಾದನೆಯು 25.22 ಕೋಟಿ ಟನ್ಗಳಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ.
ತೊಗರಿ, ಉದ್ದು ಸೇರಿದಂತೆ ಬೇಳೆಕಾಳುಗಳ ಉತ್ಪಾದನೆಯು ಹಿಂದಿನ ವರ್ಷದ 1.71 ಕೋಟಿ ಟನ್ಗೆ ಹೋಲಿಸಿದರೆ 2015–16ರಲ್ಲಿ 1.70 ಕೋಟಿ ಟನ್ಗಳಷ್ಟಾಗಲಿದೆ.
ಉತ್ಪಾದನೆಯಲ್ಲಿ ಕುಸಿತದ ಕಾರಣದಿಂದಾಗಿ ಬೇಳೆಕಾಳುಗಳ ಬೆಲೆಯು ಮುಂಬರುವ ದಿನಗಳಲ್ಲಿ ದುಬಾರಿ ಮಟ್ಟದಲ್ಲಿಯೇ ಇರಲಿದೆ ಎಂದು ಊಹಿಸಲಾಗಿದೆ. ಮುಂಗಾರು ಕೈಕೊಟ್ಟಿದ್ದರಿಂದ ಉತ್ಪಾದನೆ ಕಡಿಮೆಯಾಗಿ ಬೇಳೆಕಾಳುಗಳ ಚಿಲ್ಲರೆ ಮಾರಾಟ ದರವು ಈಗಾಗಲೇ ಏರುಗತಿಯಲ್ಲಿ ಇದೆ.
ಬೇಳೆಕಾಳುಗಳಲ್ಲದೆ ಅಕ್ಕಿ, ಉರುಟು ಧಾನ್ಯಗಳ ಉತ್ಪಾದನೆಯೂ ಕಡಿಮೆಯಾಗಲಿದೆ ಎಂದು ಕೃಷಿ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ಅಂದಾಜಿಸಲಾಗಿದೆ.
ಆದರೆ, ಗೋಧಿ ಉತ್ಪಾದನೆಯು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳಗೊಳ್ಳಲಿದ್ದು, ಈ ಹಿಂದಿನ 8.65 ಕೋಟಿ ಟನ್ಗೆ ಹೋಲಿಸಿದರೆ 9.4 ಕೋಟಿ ಟನ್ಗಳಷ್ಟಾಗಲಿದೆ. ಆಹಾರೇತರ ಉತ್ಪನ್ನಗಳ ಪೈಕಿ ಎಣ್ಣೆ ಬೀಜ, ಸಕ್ಕರೆ, ಹತ್ತಿ, ಸಣಬಿನ ಉತ್ಪಾದನೆಯೂ 2015–16ನೆ ಬೆಳೆ ವರ್ಷದಲ್ಲಿ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.