ನವದೆಹಲಿ (ಪಿಟಿಐ): ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಆಹಾರ ಭದ್ರತಾ ಯೋಜನೆಯನ್ನು `ಅಕ್ಷರಶಃ ಮತ್ತು ಕಟ್ಟುನಿಟ್ಟಾಗಿ' ಜಾರಿಗೆ ತರುವಂತೆ ಕಾಂಗ್ರೆಸ್ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೂಚಿಸಿದ್ದಾರೆ.
ಇಲ್ಲಿ ಶನಿವಾರ ಕಾಂಗ್ರೆಸ್ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ ಸೋನಿಯಾ, ತಮ್ಮ ಮಹಾತ್ವಾಕಾಂಕ್ಷೆ ಯೋಜನೆಯ ಜಾರಿ ಕುರಿತು ಚರ್ಚಿಸಿದರು. ಈ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಆಹಾರ ಸಚಿವ ವಿ. ಥಾಮಸ್, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಪಕ್ಷದ ಪ್ರಮುಖರ ಸಮಿತಿಯ ಸದಸ್ಯರು ಭಾಗವಹಿಸಿದ್ದರು.
ದೇಶದ 82 ಕೋಟಿ ಜನರಿಗೆ ಅಗ್ಗದ ದರದಲ್ಲಿ ಆಹಾರ ಧಾನ್ಯಗಳನ್ನು ಒದಗಿಸುವ ಈ ಯೋಜನೆಯ ಜಾರಿಗೆ ಕಳೆದ ವಾರವಷ್ಟೇ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. 2014ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಜ್ಜುಗೊಳ್ಳುತ್ತಿರುವ ಸಂದರ್ಭದಲ್ಲೇ ಈ ಮಹತ್ವದ ಸಭೆ ನಡೆದಿದೆ.
ಚುನಾವಣೆಯ ಫಲಿತಾಂಶವನ್ನು ತನ್ನ ಪರ ತಿರುಗಿಸುವ ಸಾಮರ್ಥ್ಯ ಈ ಯೋಜನೆಗೆ ಇದೆ ಎಂದು ಕಾಂಗ್ರೆಸ್ ಬಲವಾಗಿ ನಂಬಿದೆ. ಚುನಾವಣೆಗೂ ಮುನ್ನ ಜನಪ್ರಿಯ ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪುವ ಯತ್ನವನ್ನೂ ಅದು ಮಾಡುತ್ತಿದೆ.
ಮೊದಲ ಹಂತದಲ್ಲಿ ಈ ಯೋಜನೆಯು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನವಾದ ಆಗಸ್ಟ್ 20ರಂದು ದೆಹಲಿಯಲ್ಲಿ ಜಾರಿಗೆ ಬರಲಿದೆ. ಕಾಂಗ್ರೆಸ್ ಆಡಳಿತದ ಕರ್ನಾಟಕ, ಉತ್ತರಾಖಂಡ, ಬಿಜೆಪಿ ಆಡಳಿತದ ಛತ್ತೀಸಗಡ, ಎಸ್ಪಿ ಆಡಳಿತದ ಉತ್ತರ ಪ್ರದೇಶ, ಜೆಡಿಯು ಆಡಳಿತದ ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ನಂತರ ಅನುಷ್ಠಾನಕ್ಕೆ ತರಲಾಗುವುದು.