ಶಿವಮೊಗ್ಗ: ಆಹಾರ ಬೆಳೆಗಳನ್ನು ಸರಳವಾಗಿ ಬೆಳೆದು ಉತ್ತಮ ಲಾಭ ಪಡೆಯುವಂತೆ ರೈತರನ್ನು ಪ್ರೋತ್ಸಾಹಿಸದೇ ಇದ್ದರೆ ದೇಶದ ಆಹಾರ ಭದ್ರತೆಗೆ ಧಕ್ಕೆ ಆಗುತ್ತದೆ ಎಂದು ನಬಾರ್ಡ್ ಬ್ಯಾಂಕ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ.ಜಿ.ಆರ್. ಚಿಂತಾಲ ಹೇಳಿದರು.
ತಾಲ್ಲೂಕಿನ ಹಾಲಲಕ್ಕವಳ್ಳಿಯಲ್ಲಿ ಈಚೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ನಬಾರ್ಡ್ ಬ್ಯಾಂಕ್ ಸಹಯೋಗದಲ್ಲಿ ಅನುಷ್ಠಾನ ಮಾಡಲಾದ ಶ್ರೀಪದ್ಧತಿ ಭತ್ತದ ಬೇಸಾಯದ ಕೃಷಿ ತಾಕಿಗೆ ಭೇಟಿ ನೀಡಿ, ಅವರು ರೈತರೊಂದಿಗೆ ಚರ್ಚಿಸಿದರು.
ಭತ್ತದ ಬೆಳೆಗಾರರು ಇದ್ದ ಜಮೀನಿನಲ್ಲಿ ಕಡಿಮೆ ಬಂಡವಾಳ ಹೂಡಿ ಲಾಭದಾಯಕವಾಗಿ ಭತ್ತ ಬೇಸಾಯ ಮಾಡಬೇಕು. ಆಧುನಿಕ ವಿಧಾನಗಳನ್ನು ಅನುಸರಿಸಬೇಕು. ಇದಕ್ಕೆ ಸರ್ಕಾರ ಸಂಘ ಸಂಸ್ಥೆಗಳು ಪ್ರೋತ್ಸಾಹ ನೀಡಬೇಕು. ಇದರಿಂದ ಆಹಾರ ಭದ್ರತೆ ನೀಡವುದರ ಜತೆಗೆ ದೇಶದ ಸುಭದ್ರತೆ ಕಾಪಾಡಲೂ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಡಿಮೆ ನೀರಾವರಿ, ಕಡಿಮೆ ಬೀಜ, ಕೂಲಿಯಾಳು, ಕಡಿಮೆ ರಾಸಾಯನಿಕೆ ಗೊಬ್ಬರ ಬಳಕೆ ಮಾಡಿ, ಉತ್ತಮ ಇಳುವರಿ ಹಾಗೂ ಪರಿಸರ ಪೂರಕವಾದ ಶ್ರೀಪದ್ಧತಿ ಭತ್ತದ ಬೇಸಾಯ ಇನ್ನಷ್ಟು ಜನಪ್ರಿಯಗೊಳ್ಳಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಭಿಯಾನ ಕಾರ್ಯಕ್ರಮದ ಯೋಜನಾಧಿಕಾರಿ ವಿಜಯ್ ಕುಮಾರ್ ನಾಗನಾಳ ಮಾತನಾಡಿ, ಜಿಲ್ಲೆಯಲ್ಲಿ 2013ನೇ ಸಾಲಿನಲ್ಲಿ 1 ಕೋಟಿ 32 ಲಕ್ಷ ಪ್ರಗತಿನಿಧಿ ಸಾಲ ನೀಡಿ 1,315 ಕುಟುಂಬಗಳ 1,423 ಎಕರೆ ಪ್ರದೇಶದಲ್ಲಿ ಭತ್ತದ ಬೇಸಾಯದಲ್ಲಿ ಶ್ರೀಪದ್ಧತಿ ಅನುಷ್ಠಾನ ಮಾಡಲಾಗಿದೆ ಎಂದು ವಿವರಿಸಿದರು. .
ಜಿಲ್ಲಾ ನಿರ್ದೇಶಕ ಸುಧೀರ್ಕುಮಾರ್ ಬಂಟ್ವಾಳ್, ಯೋಜನಾಧಿಕಾರಿ ಜಗದೀಶ್ ಅಲ್ಸೆ, ತಾಲ್ಲೂಕು ಕೃಷಿ ಅಧಿಕಾರಿ ಡಿ.ಯೋಗೀಶ್, ಮತ್ತೂರು ವಲಯದ ಮೇಲ್ವಿಚಾರಕ ಹರೀಶ್, ಹಾಲಲಕ್ಕವಳ್ಳಿ ಸೇವಾಪ್ರತಿನಿಧಿ ಚಿಕ್ಕಣ, ಜಿಲ್ಲಾ ನಬಾರ್ಡ್ ಸಹಾಯಕ ಪ್ರಬಂಧಕ ರಾಘವೇಂದ್ರ, ಬಾನೇಶ್, ಅಶೋಕ ಉಪಸ್ಥಿತರಿದ್ದರು.