ನವದೆಹಲಿ (ಪಿಟಿಐ): ಪ್ರಸಕ್ತ ವರ್ಷ ಸುಮಾರು 250 ದಶಲಕ್ಷ ಟನ್ ಆಹಾರಧಾನ್ಯ ಉತ್ಪಾದನೆಯ ಸಾಧ್ಯತೆ ಇದ್ದು, ನಿಗದಿತ ಗುರಿ ಮೀರುವ ನಿರೀಕ್ಷೆ ಇದೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕೃಷಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಫಲ ನೀಡಿದೆ ಎಂದ ಅವರು, ದಾಖಲೆ ಪ್ರಮಾಣದ ಆಹಾರಧಾನ್ಯ ಉತ್ಪಾದಿಸುವ ಮೂಲಕ ರೈತರು ಇಡೀ ದೇಶವೇ ಹೆಮ್ಮೆ ಪಡುವಂತ ಸಾಧನೆ ಮಾಡಿದ್ದಾರೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.
ಪ್ರಸಕ್ತ ವರ್ಷ 245 ದಶಲಕ್ಷ ಟನ್ ಆಹಾರ ಧಾನ್ಯಗಳ ಉತ್ಪಾದನೆ ಗುರಿ ಹೊಂದಲಾಗಿತ್ತು. ಆದರೆ, ನಿಗದಿತ ಗುರಿಗಿಂತ ಐದು ದಶಲಕ್ಷ ಟನ್ ಹೆಚ್ಚಿನ ಆಹಾರಧಾನ್ಯ ಮತ್ತು 34 ದಶಲಕ್ಷ ಟನ್ ಹತ್ತಿ ಉತ್ಪಾದಿಸುವ ಸಾಧ್ಯತೆ ಇದ್ದು, ಇದೊಂದು ದಾಖಲೆ ಎಂದರು.
ರಾಷ್ಟ್ರಪತಿ ಭವನದಲ್ಲಿ ಬುಧವಾರ ನಡೆದ ಕೃಷಿ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಸಿಂಗ್, `ಆಹಾರ ಉತ್ಪಾದನೆ ಕ್ಷೇತ್ರದಲ್ಲಿ ನಾವು ಕ್ರಮಿಸಬೇಕಾದ ಹಾದಿ ಇನ್ನೂ ಬಹಳ ಇದೆ~ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರಪತಿ ಪ್ರತಿಭಾ ಪಾಟೀಲ, 20 ರಾಜ್ಯಪಾಲರು, ಎಂಟು ಕೇಂದ್ರ ಸಚಿವರು, ಐವರು ಮುಖ್ಯಮಂತ್ರಿಗಳು, 37 ಕೃಷಿ ವಿ.ವಿ ಕುಲಪತಿಗಳು ಭಾಗವಹಿಸಿದ್ದರು.