ಬೆಂಗಳೂರು: `ಇ- ಆಡಳಿತ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಮಾತ್ರವಲ್ಲ; ಸರ್ಕಾರಕ್ಕೂ ಲಾಭವಾಗಿದೆ~ ಎಂದು ಮಾಹಿತಿ ತಂತ್ರಜ್ಞಾನ ಇಲಾಖೆಯ ವಿಶೇಷ ಅಧಿಕಾರಿ ಜಿತೇಂದ್ರ ಪ್ರಸಾದ್ ಹೇಳಿದರು.
`ಬ್ಯುಸಿನೆಸ್ ಸಾಫ್ಟ್ವೇರ್ ಅಲಯನ್ಸ್~ (ಬಿಎಸ್ಎ) ಸಂಸ್ಥೆ ರಾಜ್ಯದ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ವರ್ಷದ ಹಿಂದೆ ಪ್ರಾರಂಭಿಸಿದ್ದ `ಸಾಫ್ಟ್ವೇರ್ ಆಸ್ತಿ ನಿರ್ವಹಣೆ~ಯ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
`ಖಜಾನೆ ವ್ಯವಹಾರಗಳನ್ನು ಗಣಕೀಕೃತಗೊಳಿಸಿದ ಮೇಲೆ ಮುಖ್ಯಮಂತ್ರಿಯವರು ಬಯಸಿದ ಕೂಡಲೇ ಆಯಾ ಕ್ಷಣದ ಹಣಕಾಸಿನ ಸ್ಥಿತಿಯನ್ನು ಪಡೆದುಕೊಳ್ಳಬಹುದಾಗಿದೆ~ ಎಂದರು.
`ದೂರ ಸಂವೇದಿ ತಂತ್ರಾಂಶ ಬಳಕೆಯಿಂದ ಅಕ್ರಮ ಗಣಿಗಾರಿಕೆ, ಅರಣ್ಯ ಮತ್ತು ಕೆರೆ ಕಟ್ಟೆ ಒತ್ತುವರಿ ತಡೆಗಟ್ಟಲು ಸಾಧ್ಯವಾಗಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಆಸ್ತಿ ತೆರಿಗೆ ವಸೂಲಿ ಕಾರ್ಯಕ್ಕೂ ಈ ತಂತ್ರಾಂಶವನ್ನು ಬಳಸುತ್ತಿದೆ~ ಎಂದರು.
`ಸರ್ಕಾರದ ವಿವಿಧ ಇಲಾಖೆಗಳು ಅನಗತ್ಯವಾಗಿ ತಂತ್ರಾಂಶಗಳನ್ನು ಖರೀದಿಸುವ ಹಾಗೂ ಖರೀದಿಸಿದ ತಂತ್ರಾಂಶಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸದೇ ಇರುವ ಪ್ರವೃತ್ತಿಗೆ ಬಿಎಸ್ಎ ಸಂಸ್ಥೆಯ ಕಾರ್ಯಕ್ರಮದಿಂದ ಕಡಿವಾಣ ಬೀಳಲಿದೆ~ ಎಂದರು.
`ಆನ್ಲೈನ್ ವ್ಯವಹಾರದ ಬಗ್ಗೆ ಅನೇಕರಿಗೆ ಈಗಲೂ ಭಯವಿದೆ. ಪೈರಸಿಗೆ ಅವಕಾಶ ಇಲ್ಲದ ಹಾಗೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡರೆ ಹೆಚ್ಚೆಚ್ಚು ಜನರು ಆನ್ಲೈನ್ ಮೂಲಕವೇ ವ್ಯವಹರಿಸಲು ತೊಡಗಿಸಿಕೊಳ್ಳುತ್ತಾರೆ~ ಎಂದರು.
ಬಿಎಸ್ಎ ಸಂಸ್ಥೆಯ ನಿರ್ದೇಶಕಿ ಲಿಜಂ ಮಿಶ್ರ ಮಾತನಾಡಿ, `ಭಾರತದಲ್ಲೇ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯದ ಸರ್ಕಾರಿ ಉದ್ದಿಮೆಗಳು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿವೆ~ ಎಂದರು.