ಬೆಂಗಳೂರು: `ಸಾರ್ವಜನಿಕರಿಗೆ ಇ-ಆಡಳಿತದಿಂದ ದಕ್ಷ, ಪಾರದರ್ಶಕ, ಭರವಸೆಯ ಆಡಳಿತ ಸೇವೆ ಲಭ್ಯವಾಗಲಿದೆ' ಎಂದು ಬೆಂಗಳೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ.ಎನ್. ರಂಗಸ್ವಾಮಿ ಹೇಳಿದರು.
ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ `ಇ-ಆಡಳಿತದ ಸವಾಲುಗಳು ಮತ್ತು ಅವಕಾಶಗಳು' ವಿಷಯದ ಕುರಿತು ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
`ಇ-ಆಡಳಿತ ಸೇವೆಯಿಂದಾಗಿ ಮನೆ ಕಂದಾಯ ಪಾವತಿಸಲು ಇಲಾಖೆಯವರೆಗೂ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಪಾವತಿ ಮಾಡಬಹುದು. ಪಾಸ್ಪೋರ್ಟ್ ಪಡೆಯುವುದು ಕೂಡ ಸುಲಭವಾಗಿದೆ' ಎಂದರು.
`ಸರ್ಕಾರದ ಸೇವೆಗಳು ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ದೊರೆಯುವಂತೆ ಮಾಡಬೇಕಾದರೆ ಇ - ಆಡಳಿತದ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು. ಶೀಘ್ರ ಕೆಲಸ, ಗುಣಮಟ್ಟದ ಸೇವೆ, ಕಡಿಮೆ ವೆಚ್ಚದಲ್ಲಿ ಮಾಹಿತಿ ಇ-ಅಡಳಿತದಿಂದ ಸಾಧ್ಯ' ಎಂದು ಹೇಳಿದರು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ನಿವೃತ್ತ ಪ್ರಾಧ್ಯಾಪಕ ಎಸ್.ಜಗದೀಶ್ ಮಾತನಾಡಿ, `ಅನಕ್ಷರಸ್ಥ ಗ್ರಾಹಕರಿಗೆ ಪ್ರಾಯೋಗಿಕವಾಗಿ ಇ-ಆಡಳಿತದ ಬಗ್ಗೆ ತರಬೇತಿ ನೀಡಬೇಕಾದ ಅಗತ್ಯವಿದೆ. ಸಾರ್ವಜನಿಕರನ್ನು ಹೆಚ್ಚು ಹೆಚ್ಚು ಇ-ಆಡಳಿತದಲ್ಲಿ ಭಾಗವಹಿಸುಂತೆ ಮಾಡುವುದು ಇದರ ಸವಾಲಾಗಿದೆ' ಎಂದರು.
ರೈಲ್ವೆ ಇಲಾಖೆಯು ಮೊದಲ ಬಾರಿಗೆ ಪರಿಣಾಮಕಾರಿಯಾಗಿ ಇ-ಆಡಳಿತ ಸೇವೆಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ' ಎಂದರು.
ರಾಷ್ಟ್ರೀಯ ಇ-ಆಡಳಿತ ವಿಭಾಗದ ನಿರ್ದೇಶಕಿ ದೀಪಾ ಸೆಂಗಾರ, ಕುಲಸಚಿವ ಪ್ರೊ. ಟಿ.ಡಿ.ಕೆಂಪರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.