ಬೆಂಗಳೂರು: ‘ನಗರದ ಕೈಗಾರಿಕೆಗಳು ಇ-ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳದಿದ್ದರೆ ಐ.ಟಿ ರಾಜಧಾನಿ ಎಂದು ಹೆಸರು ಗಳಿಸಿರುವ ಬೆಂಗಳೂರಿನ ಖ್ಯಾತಿ ಮಣ್ಣುಪಾಲಾಗಲಿದೆ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಎ.ಎಸ್.ಸದಾಶಿವಯ್ಯ ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕೆಗಳ ಸಂಘ, ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಜಂಟಿಯಾಗಿ ಇತ್ತೀಚೆಗೆ ಆಯೋಜಿಸಿದ್ದ ಅಪಾಯಕಾರಿ ತ್ಯಾಜ್ಯ ವಸ್ತುಗಳ ನಿರ್ವಹಣೆ ಕುರಿತ ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ತ್ಯಾಜ್ಯ ನಿರ್ವಹಣೆಯನ್ನು ಕೇವಲ ಸರ್ಕಾರ ಅಥವಾ ಸರ್ಕಾರಿ ಸಂಸ್ಥೆಗಳನ್ನು ಜವಾಬ್ದಾರರನ್ನಾಗಿ ಮಾಡಬಾರದು.ಸಮಸ್ಯೆ ನಿರ್ವಹಣೆಗೆ ಕೈಗಾರಿಕೆಗಳು ಕೈಜೋಡಿಸಬೇಕು.ಕೈಗಾರಿಕೆಗಳು ಒಟ್ಟಾಗಿ ಸೇರಿ ಸಂಘ-ಸಂಸ್ಥೆಗಳ ಮೂಲಕ ಆ ಪ್ರದೇಶದಲ್ಲಿ ಉತ್ಪತ್ತಿಯಾಗುವ ಘನ ತ್ಯಾಜ್ಯ, ಇ-ತ್ಯಾಜ್ಯವನ್ನು ನಿರ್ವಹಿಸಲು ಕ್ರಮಕೈಗೊಳ್ಳಬೇಕು’ ಎಂದು ಅವರು ಹೇಳಿದರು.
ಬೆಂಗಳೂರು ಜಲಮಂಡಳಿಯ ಮುಖ್ಯ ಎಂಜಿನಿಯರ್ ರಾಮಸ್ವಾಮಿ ಮಾತನಾಡಿ, ‘ತ್ಯಾಜ್ಯ ನೀರನ್ನು ಶುದ್ಧೀಕರಿಸುವ ಘಟಕಗಳನ್ನು ಈಗಾಗಲೇ ನಗರದ ಹಲವು ಪ್ರದೇಶಗಳಲ್ಲಿ ಸ್ಥಾಪಿಸಲಾಗಿದೆ.ಇನ್ನೂ ಕೆಲವೆಡೆ ಸ್ಥಾಪಿಸಲು ಜಲಮಂಡಳಿ ಸಿದ್ಧವಿದೆ. ಆದರೆ, ಇದಕ್ಕೆ ಅಗತ್ಯವಾದ ಭೂಮಿಯನ್ನು ಕೈಗಾರಿಕಾ ಸಂಘಗಳು ನೀಡಬೇಕು’ ಎಂದರು.