ಆನೇಕಲ್: ಜೀವನದಲ್ಲಿ ಜಿಗುಪ್ಸೆಗೊಂಡ ದಂಪತಿ ವಿಷಕಾರಿ ಚುಚ್ಚುಮದ್ದು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಚಂದಾಪುರ ಬಳಿ ಸೂರ್ಯ ಸಿಟಿಯಲ್ಲಿ ನಡೆದಿದೆ.
ಮೃತರನ್ನು ಕನ್ಯಾಕುಮಾರಿ ಮೂಲದ ಅಶೋಕ್ ಕುಮಾರ್ (26) ಮತ್ತು ನಾರಾಯಣ ಹೃದಯಾಲಯದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಮೇನಕಾ ರಾಣಿ (24) ಎಂದು ಗುರುತಿಸಲಾಗಿದೆ. ಇಬ್ಬರೂ ತಲಾ ಐದಕ್ಕೂ ಹೆಚ್ಚು ವಿಷಕಾರಿ ಚುಚ್ಚುಮದ್ದುಗಳನ್ನು ಚುಚ್ಚಿಕೊಂಡು ಒಟ್ಟಿಗೇ ಮೃತಪಟ್ಟಿದ್ದಾರೆ. ಸಾಯುವ ಮುನ್ನ ಮರಣ ಪತ್ರವನ್ನು ಬರೆದಿಟ್ಟಿದ್ದಾರೆ ಎಂದು ಹೆಬ್ಬಗೋಡಿ ಠಾಣೆಯ ಪಿಎಸ್ಐ ಶಶಿಧರ್ ತಿಳಿಸಿದ್ದಾರೆ.
ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ವಾಹನಗಳ ಜಪ್ತಿ ಕೆಲಸ ಮಾಡುತ್ತಿದ್ದ ಅಶೋಕ್ ಈ ಹಿಂದೆ ಇಬ್ಬರನ್ನು ವಿವಾಹ ಮಾಡಿಕೊಂಡಿದ್ದ. ಮೊದಲ ಹೆಂಡತಿ ಬೇರೊಬ್ಬರ ಜೊತೆ ಪರಾರಿಯಾಗಿದ್ದಳು. ಎರಡನೇ ಹೆಂಡತಿ ಜೊತೆಗೂ ಈತನಿಗೆ ಹೊಂದಾಣಿಕೆಯಿರಲಿಲ್ಲ ಎನ್ನಲಾಗಿದೆ.
ಅಶೋಕ್ ಬುಧವಾರ ರಾತ್ರಿ ಸ್ನೇಹಿತ ಗಾಂಧಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಲ್ಲದೆ, ತಾಯಿ ಮತ್ತು ಎರಡನೇ ಹೆಂಡತಿಗೆ ತಿಳಿಸುವಂತೆ ಹೇಳಿದ್ದ. ಕುಟುಂಬದವರು ಬರುವ ವೇಳೆಗೆ ಆತ್ಮಹತ್ಯೆಗೆ ಶರಣಾಗಿದ್ದರು~ ಎಂದು ಪೊಲೀಸರು ತಿಳಿಸಿದ್ದಾರೆ.