ನವದೆಹಲಿ (ಪಿಟಿಐ): ಸಾಮೂಹಿಕ ಅತ್ಯಾಚಾರ ಖಂಡಿಸಿ ಯುವ ಸಮೂಹ ಭಾನುವಾರವೂ ಪ್ರತಿಭಟನೆಯನ್ನು ಮುಂದುವರೆಸಿದ್ದು ಇಂಡಿಯಾ ಗೇಟ್ ಸಮೀಪ ಪ್ರತಿಭಟನಾನಿರತರು ಪೊಲೀಸರ ಮೇಲೆ ಕಲ್ಲು ತೂರಿದ ಪರಿಣಾಮ ಅವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಪಿರಂಗಿಗಳನ್ನು ಸಿಡಿಸಿದರು.
ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಇಂಡಿಯಾ ಗೇಟ್ ಮೈದಾನದ ಬಳಿ ನೆರೆದ ಪ್ರತಿಭಟನಾಕಾರರು ಪೊಲೀಸರು ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಕೆಲವರು ಪೊಲೀಸರ ಮೇಲೆ ಕಲ್ಲು ತೂರಿದ ಪರಿಣಾಮ ಪೊಲೀಸರು ಗುಂಪು ಚದುರಿಸಲು ಅಶ್ರುವಾಯು ಮತ್ತು ಜಲಪಿರಂಗಿಗಳನ್ನು ಸಿಡಿಸಿದರು.
ಕೆಲ ಪ್ರತಿಭಟನಾಕಾರರು ಕಬ್ಬಿಣದ ರಾಡ್ಗಳನ್ನು ಹಿಡಿದು ಪೊಲೀಸರ ಮೇಲೆ ಹಲ್ಲೆ ನಡೆಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.