ಕೆಲಸದ ನಿಮಿತ್ತ ಬೆಂಗಳೂರಿನಿಂದ ಗುರುಮಿಠಕಲ್ ಬಸ್ ಮೂಲಕ ರಾಯಚೂರಿನ ಗಿಲ್ಲೇಸೂಗೂರಿಗೆ ಹೊರಟೆನು. ರಾತ್ರಿ 10ರ ಸುಮಾರಿಗೆ ಆಂಧ್ರಪ್ರದೇಶದ ಹಿಂದೂಪುರವನ್ನು ತಲುಪಿದಾಗ ಎರಗಿಬಂದ ಸುದ್ದಿ ನಮ್ಮೆಲ್ಲರನ್ನೂ ಬೆಚ್ಚಿಬೀಳಿಸಿತು. ಆಂಧ್ರ ವಿಭಜನೆ ವಿರೋಧಿಸಿ ಉದ್ರಿಕ್ತ ಗುಂಪು ಬಸ್ಗಳಿಗೆ ಕಲ್ಲು ತೂರುತ್ತಿದೆ. ಮುಂದೆ ಹೋಗಬೇಡಿ ಎಂದು ಎಚ್ಚರಿಸಿದರು.
ಚಾಲಕರು, ಡಿಪೊ ಅಧಿಕಾರಿಗಳಿಗೆ ಫೋನ್ ಮಾಡಿ ವಿಚಾರಿಸಿದಾಗ ಹಿಂದೂಪುರ ಡಿಪೊದಲ್ಲಿಯೇ ಉಳಿದುಬಿಡಿ. ಪ್ರಯಾಣಿಕರಿಗೆ ಉಳಿದ ಹಣ ಹಿಂದಿರುಗಿಸಿ ಎಂದು ಹೇಳಿದರು. ಪ್ರಯಾಣಿಕರನ್ನು ಕೆಳಗಿಳಿಸಿ ಅವರು `ಕರ್ತವ್ಯಪ್ರಜ್ಞೆ' ಮೆರೆದರು. ಆ ಸರಿರಾತ್ರಿಯಲ್ಲಿ ಲಗೇಜು, ಪುಟ್ಟ ಮಕ್ಕಳು, ಹೆಂಗಸರು ಎಲ್ಲಿಗೆ ಹೋಗಬೇಕು? ನಾವು ಕೆಲವರು ಧೈರ್ಯ ಮಾಡಿ ಐದಾರು ಕಿ.ಮೀ. ದೂರದ ರೈಲ್ವೆ ನಿಲ್ದಾಣಕ್ಕೆ ಹೋಗಿ ವಿಚಾರಿಸಿ ರಾಯಚೂರು ಕಡೆಗೆ ಪ್ರಯಾಣಿಸಿದೆವು. ಉಳಿದವರ ಸ್ಥಿತಿ ಗೊತ್ತಾಗಲಿಲ್ಲ. ಇಂತಹ ಪ್ರತಿಭಟನೆ, ಬಂದ್ಗಳು ಬೇಕೆ?