ಮಂಗಳೂರು: ಶಿವಪ್ರಸಾದ್ ಬಾಳಿಗಾ ಸ್ಮರಣಾರ್ಥ ಅಖಿಲ ಭಾರತ ಮಟ್ಟದ ಆಹ್ವಾನಿತ ಪುರುಷ ಮತ್ತು ಮಹಿಳೆಯರ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿ ನಗರದ ಉರ್ವಾ ಸ್ಟೋರ್ಸ್ ಮೈದಾನದಲ್ಲಿ ಗುರುವಾರದಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನಾ ಸಮಿತಿ ಕಾರ್ಯದರ್ಶಿ ಸತೀಶ್ ಕುಮಾರ್, `ಡೆಹ್ರಾಡೂನ್ನ ಒಎನ್ಜಿಸಿ, ಚೆನ್ನೈನ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಮತ್ತು ಇಂಡಿಯನ್ ಕಸ್ಟಮ್ಸ ತಂಡಗಳು, ಕೇರಳದ ಬಿಪಿಸಿಎಲ್ ಕೊಚ್ಚಿ ರಿಫೈನರಿ ಮತ್ತು ಕೆಎಸ್ಇಬಿ, ಇಂಡಿಯನ್ ನೇವಿ ಸೇರಿದಂತೆ ಹಲವು ಪ್ರತಿಷ್ಠಿತ ತಂಡಗಳು ಭಾಗವಹಿಸಲಿವೆ.
ಮಹಿಳೆಯರ ವಿಭಾಗದಲ್ಲಿ ಕೇರಳದ ಕೆಎಸ್ಸಿಬಿ, ಸಾಯಿ ತಲಚೇರಿ, ಮೈಸೂರು ಸ್ಪೋರ್ಟ್ಸ್ ಹಾಸ್ಟೆಲ್, ಕಲ್ಲಿಕೋಟೆ ವಿವಿ ತಂಡಗಳು ಪಾಲ್ಗೊಳ್ಳಲಿವೆ. ವಿಜೇತ 4 ತಂಡಗಳಿಗೆ ರೂ. 1 ಲಕ್ಷ, ರೂ. 60 ಸಾವಿರ, ರೂ. 40 ಸಾವಿರ, ರೂ. 20 ಸಾವಿರ ನಗದು ಮತ್ತು ಫಲಕ ನೀಡಲಾಗುವುದು~ ಎಂದರು.
ಉರ್ವಾ ಸ್ಟೋರ್ಸ್ನ ಮಂಗಳಾ ಫ್ರೆಂಡ್ಸ್ ಸರ್ಕಲ್ ಟೂರ್ನಿ ಆಯೋಜಿಸಿದ್ದು, ಇದೇ 19ರವರೆಗೂ ನಡೆಯಲಿದೆ. 16ರ ಸಂಜೆ 5.30ಕ್ಕೆ ಉದ್ಯಮಿ ಲ್ಯಾನ್ಸಿ ಮಸ್ಕರೇನಸ್ ಟೂರ್ನಿ ಉದ್ಘಾಟಿಸುವರು. ವಿಧಾನಸಭೆ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮಹಿಳಾ ಟೂರ್ನಿಯನ್ನು ಫೆ. 17ರ ಸಂಜೆ 5.30ಕ್ಕೆ ಉದ್ಯಮಿ ಸುಶ್ಮಾ ಎಂ.ಮಲ್ಲಿ ಉದ್ಘಾಟಿಸಲಿದ್ದು, ಸಮಾಜ ಸೇವಕಿ ಅನಿತಾ ಶೆಲ್ಲಿ ಪಂದ್ಯಕ್ಕೆ ಚಾಲನೆ ನೀಡುವರು. ಒಟ್ಟು 4 ಸಾವಿರ ಆಸನ ವ್ಯವಸ್ಥೆ ಇದೆ ಎಂದು ಅವರು ವಿವರಿಸಿದರು.